ADVERTISEMENT

ಪ್ಲಾಸ್ಟಿಕ್‌ ಚೀಲದಲ್ಲಿ ಸಿಕ್ಕಿದ್ದ ಮೃತದೇಹದ ಗುರುತು ಪತ್ತೆ

ಪಟಾಕಿ ತರಲು ಹೋಗಿ ನಾಪತ್ತೆಯಾಗಿದ್ದ ತರುಣ ಶವವಾಗಿದ್ದ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 8:09 IST
Last Updated 4 ನವೆಂಬರ್ 2021, 8:09 IST

ಬೆಂಗಳೂರು: ರಾಜರಾಜೇಶ್ವರಿನಗರ ವ್ಯಾಪ್ತಿಯ ಡಿಸೋಜನಗರದ ರಾಜಕಾಲುವೆ ಬಳಿ ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಿ ಬಿಸಾಡಿದ್ದ ಮೃತದೇಹದ ಗುರುತು ಪತ್ತೆಯಾಗಿದೆ.

ಮೃತ ಯುವಕನನ್ನು ಭಾರತಿನಗರದ ತರುಣ್‌ (21) ಎಂದು ಗುರುತಿಸಲಾಗಿದೆ.

‘ಗೆಳೆಯರೊಂದಿಗೆ ಹೊಸೂರಿಗೆ ಹೋಗಿ‍ಪಟಾಕಿ ತೆಗೆದುಕೊಂಡು ಬರುವುದಾಗಿ ಹೇಳಿದ್ದ ತರುಣ್‌, ತಾಯಿಯ ಬಳಿ ಹಣ ಪಡೆದು ರಾಜ್ಯೋತ್ಸವದಂದು (ನ.1) ಮನೆಯಿಂದ ಹೋಗಿದ್ದ. ರಾತ್ರಿಯಾದರೂ ಮಗ ಮನೆಗೆ ಮರಳಿರಲಿಲ್ಲ. ಇದರಿಂದ ಗಾಬರಿಗೊಂಡಿದ್ದ ಪಾಲಕರು ಭಾರತಿನಗರ ಠಾಣೆಯಲ್ಲಿ ತರುಣ್‌ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು’ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಯುವಕನ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಸುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.