ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 27ನೇ ವಾರ್ಷಿಕ ಘಟಿಕೋತ್ಸವ ಮೇ 6ರಂದು ಬೆಳಿಗ್ಗೆ 11.30ಕ್ಕೆ ನಿಮ್ಹಾನ್ಸ್ ಸಮಾವೇಶ ಕೇಂದ್ರದಲ್ಲಿ ನಡೆಯಲಿದೆ.
ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಜೀಂ ಪ್ರೇಮ್ಜಿ ಫೌಂಡೇಷನ್ ಅಧ್ಯಕ್ಷ ಅಜೀಂ ಪ್ರೇಮ್ಜಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಉಪಸ್ಥಿತರಿರಲಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಭಗವಾನ್ ಬಿ.ಸಿ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ ವಿಜ್ಞಾನಿ, ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ ಕೇಂದ್ರದ ಮುಖ್ಯಸ್ಥ ಹೊಂಬೇಗೌಡ ಶರತ್ಚಂದ್ರ, ಒಎಂಎಫ್ ಸರ್ಜನ್ ಡಾ. ಗಿರೀಶ್ ರಾವ್ ಮತ್ತು ನರರೋಗ ತಜ್ಞ ಡಾ. ಜಿ.ಟಿ. ಸುಭಾಷ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
93 ವಿದ್ಯಾರ್ಥಿಗಳಿಗೆ 109 ಚಿನ್ನದ ಪದಕ ಸೇರಿ 63,982 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. 82 ಪಿಎಚ್.ಡಿ., 265 ಸೂಪರ್ ಸ್ಪೆಷಾಲಿಟಿ 8,588 ಸ್ನಾತಕೋತ್ತರ ಪದವಿ, 6 ಸ್ನಾತಕೋತ್ತರ ಡಿಪ್ಲೊಮಾ, 515 ಫೆಲೋಶಿಪ್ ಕೋರ್ಸ್, 9 ಸರ್ಟಿಫಿಕೇಟ್ ಕೋರ್ಸ್ ಹಾಗೂ 54,517 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು ಶೇ 87.49ರಷ್ಟು ಫಲಿತಾಂಶ ಪ್ರಕಟವಾಗಿದೆ ಎಂದು ತಿಳಿಸಿದರು.
ಗಿರೀಶ್ಗೆ 6 ಚಿನ್ನ:
ಪಿಇಎಸ್ ಫಾರ್ಮಸಿ ಕಾಲೇಜಿನ ಫಾರ್ಮಾ ಡಿ. ಕೋರ್ಸ್ನ ಡಾ. ಗಿರೀಶ್ ಬಿ.ಎಸ್. ಆರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಡಾ. ಗನ್ಯಾಶ್ರೀ (ಆಯುಷ್) 4, ಶಿವಮೊಗ್ಗ ಶರಾವತಿ ದಂತ ಕಾಲೇಜಿನ ಡಾ. ಪ್ರಕೃತಿ ಸಿ. ಪಾಟೀಲ ಅವರು 3 ಚಿನ್ನದ ಪದಕ ಮತ್ತು 4 ನಗದು ಬಹುಮಾನ ಹಾಗೂ ನೈಟೆಂಗೇಲ್ ನರ್ಸಿಂಗ್ ಕಾಲೇಜಿನ ಅಲೀನಾ ಜೋಸ್ (ಬಿಎಸ್ಸಿ ನರ್ಸಿಂಗ್) 3 ಚಿನ್ನದ ಪದಕಗಳನ್ನು ಪಡೆದಿದ್ದಾರೆ. 22 ಕ್ಯಾರೆಟ್ನ 5 ಗ್ರಾಂ. ತೂಕದ ಚಿನ್ನದ ಪದಕವನ್ನು ನೀಡಲಾಗುತ್ತದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪಿ.ಆರ್. ಶಿವಪ್ರಸಾದ್ ಮತ್ತು ಮೌಲ್ಯಮಾಪನ ಕುಲಸಚಿವ ಡಾ. ರಿಯಾಜ್ ಬಾಷ ಎಸ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.