ADVERTISEMENT

ಸಂಪುಟ ಸಭೆಗೆ ಬಂದು ಹೋದ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 19:45 IST
Last Updated 19 ನವೆಂಬರ್ 2018, 19:45 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ಸೋಮವಾರ ನಡೆದ ಸಚಿವ ಸಂಪುಟ ಸಭೆಯಿಂದ ‍ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅರ್ಧದಲ್ಲೇ ನಿರ್ಗಮಿಸಿದರು. ಇದರ ಬೆನ್ನಲ್ಲೇ, ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು.

‘ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲಾ ರಾಜಕಾರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ’ ಎಂದು ಜಾರಕಿಹೊಳಿ ಸಹೋದರರು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ನಡೆದ ಯಾವುದೇ ಸಂಪುಟ ಸಭೆಗೆ ರಮೇಶ ಅವರು ಹಾಜರಾಗಿರಲಿಲ್ಲ. ‘ದೇವರಲ್ಲಿ ಯಾವುದೋ ವಿಷಯದ ಬಗ್ಗೆ ಕೇಳಿಕೊಂಡಿದ್ದೇನೆ. ಅದು ಈಡೇರಿದ ಬಳಿಕ ಸಭೆಗೆ ಹೋಗುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದರು.

ಸೋಮವಾರ ನಡೆದ ಸಭೆಯಲ್ಲಿ ಕೆಲವು ನಿಮಿಷಗಳಷ್ಟೇ ಹಾಜರಿದ್ದರು. ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ವದಂತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಸಂಪುಟ ಸಭೆಯಲ್ಲಿ ರಮೇಶ ಭಾಗವಹಿಸಿದ್ದರು. ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ಕೊಟ್ಟಿದ್ದಾರೆ ಎಂಬುದೆಲ್ಲಾ ಸುಳ್ಳು. ಬಿಜೆಪಿಯವರು ಹೇಳುತ್ತಿರುವಂತೆ ಇತರ ಹದಿನಾರು ಶಾಸಕರೂ ರಾಜೀನಾಮೆ ನೀಡಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.

ADVERTISEMENT

* ನಾನು ಯಾಕೆ ರಾಜೀನಾಮೆ ಕೊಡಲಿ. ಅಂತಹ ಪ್ರಶ್ನೆಯೇ ಉದ್ಭವಿಸಿಲ್ಲ. ಅವೆಲ್ಲ ಸುಳ್ಳು ಸುದ್ದಿ

-ರಮೇಶ ಜಾರಕಿಹೊಳಿ, ಪೌರಾಡಳಿತ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.