ಬೆಂಗಳೂರು: ಸಾರ್ವಜನಿಕ ಉದ್ಯಾನಗಳಿಗೆ ಸಾಕು ನಾಯಿಗಳನ್ನು ಕರೆದೊಯ್ಯುವಾಗ ಮಣ್ಣಿನಲ್ಲಿ ಸುಲಭವಾಗಿ ಕರಗುವ ಪೂಪ್ ಬ್ಯಾಗ್(ಶೌಚ ಚೀಲ) ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸುವಂತೆ ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಪ್ರತಿಕ್ರಿಯೆ ಸಲ್ಲಿಸುವಂತೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲು ಪೀಠ ಆದೇಶಿಸಿದೆ.
ಸಿಯುಪಿಎ(ಕಂಪಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್) ಅರ್ಜಿ ಸಲ್ಲಿಸಿದ್ದು, ‘ಘನ ತ್ಯಾಜ್ಯ ನಿರ್ವಹಣೆ ಬೈಲಾ– 2020 ಮತ್ತು ಆಗಸ್ಟ್ 24, 2020ರ ಸುತ್ತೋಲೆಯಲ್ಲಿ ಇದನ್ನು ಕಡ್ಡಾಯಗೊಳಿಸಿಲ್ಲ. ಉದ್ಯಾನಗಳಿಗೆ ನಾಯಿಗಳನ್ನು ಕರೆದೊಯ್ಯಲು ಅವಕಾಶ ನೀಡಿ ಪೂಪ್ ಬ್ಯಾಗ್ ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸಲು ನಿರ್ದೇಶನ ನೀಡಬೇಕು’ ಎಂದು ಕೋರಿದೆ.
‘ಬೈಲಾ ರೂಪಿಸಿಕೊಳ್ಳಲು ಬಿಬಿಎಂಪಿ ಕಾಯ್ದೆಯಲ್ಲಿ ಅವಕಾಶ ಇದೆ. ಉದ್ಯಾನಗಳ ಶುಚಿತ್ವವನ್ನು ಖಾತರಿಪಡಿಸುವುದು ಬಿಬಿಎಂಪಿಯ ಕರ್ತವ್ಯ. ಮಾರ್ಗಸೂಚಿ ಉಲ್ಲಂಘಿಸಿ ಸಾಕು ನಾಯಿಗಳ ಮಲವನ್ನು ಉದ್ಯಾನದಲ್ಲೇ ಬಿಟ್ಟು ಹೋಗುವವರಿಗೆ ದಂಡ ವಿಧಿಸಬೇಕು’ ಎಂದು ಅರ್ಜಿದಾರರು ಹೇಳಿದ್ದಾರೆ.
ಉದ್ಯಾನದ ಹುಲ್ಲುಹಾಸಿನ ಮೇಲೆ ನಾಯಿಗಳ ಮಲ ವಿಸರ್ಜನೆ ಮಾಡಿದರೆ ಆ ಜಾಗವನ್ನು ನಾಯಿಗಳ ಮಾಲೀಕರೇ ಸ್ವಚ್ಛಗೊಳಿಸಬೇಕು ಎಂಬ ಸುತ್ತೋಲೆ ಇದೆ. ಆದರೆ, ನಿರ್ದಿಷ್ಟ ದಂಡ ವಿಧಿಸದ ಕಾರಣಕ್ಕೆ ಈ ನಿಯಮ ಪಾಲನೆಯಾಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲ ಅಲ್ವಿನ್ ಸೆಬಾಸ್ಟಿಯನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.