ಬೆಂಗಳೂರು: ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ್ ಗಾಂಧಿ ಅವರಿಗೆ ಎಐಡಿಎಸ್ಒ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ವಿಶ್ವವಿದ್ಯಾಲಯ ವ್ಯಾಪ್ತಿಯ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳ ತರಗತಿ ಮುಗಿದು ಒಂದು ತಿಂಗಳು ಕಳೆದಿದೆ. ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆಯ ಸಿದ್ಧತೆಗೆಂದು ರಜೆಯಲ್ಲಿದ್ದಾರೆ. ಆದರೂ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ. ಕೂಡಲೇ ವೇಳಾಪಟ್ಟಿ ಬಿಡುಗಡೆ ಮಾಡಬೇಕು ಎಂದು ಕೋರಿದರು.
ಚುನಾವಣೆ ಘೋಷಣೆಯಾದರೆ ಪರೀಕ್ಷೆ ನಡೆಸಲು ಸಾಧ್ಯ ಆಗುವುದಿಲ್ಲ. ಚುನಾವಣೆಯ ನಂತರವೇ ಪರೀಕ್ಷೆ ನಡೆಸಿದರೆ ಮುಂದಿನ ಸೆಮಿಸ್ಟರ್ಗೆ ತೊಂದರೆ ಆಗಲಿದೆ. ಶೈಕ್ಷಣಿಕ ರಚನೆಯೇ ಕುಸಿಯುತ್ತದೆ. ಮುಂದಿನ ವರ್ಷದ ದಾಖಲಾತಿ, ವಿದ್ಯಾರ್ಥಿವೇತನ, ಹಾಸ್ಟೆಲ್ ವ್ಯವಸ್ಥೆ ಎಲ್ಲವೂ ಅಸ್ತವ್ಯಸ್ತ ಆಗಲಿದೆ. ವಿದ್ಯಾರ್ಥಿಗಳ ಭವಿಷ್ಯ, ಶೈಕ್ಷಣಿಕ ಜೀವನವು ದೊಡ್ಡ ಅಪಾಯದಲ್ಲಿ ಸಿಲುಕುತ್ತದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಕುಲಪತಿ, ವೇಳಾಪಟ್ಟಿ ಬಿಡುಗಡೆಯ ಕುರಿತು ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.