ADVERTISEMENT

ಸುಪ್ರೀಂ ತೀರ್ಪಿನ ಅನುಸಾರ ಪಿಂಚಣಿ ನೀಡಿ: ನಿವೃತ್ತ ನೌಕರರ ಆಗ್ರಹ

ಪ್ರತಿಭಟನಾ ಸಭೆ ನಡೆಸಿದ ನಿವೃತ್ತ ನೌಕರರು

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 16:27 IST
Last Updated 28 ಜನವರಿ 2023, 16:27 IST
ಪಿಂಚಣಿಗೆ ಆಗ್ರಹಿಸಿ ಭವಿಷ್ಯ ನಿಧಿ ಕಚೇರಿ ಮುಂದೆ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.
ಪಿಂಚಣಿಗೆ ಆಗ್ರಹಿಸಿ ಭವಿಷ್ಯ ನಿಧಿ ಕಚೇರಿ ಮುಂದೆ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.   

ಬೆಂಗಳೂರು: ‘ಪಿಂಚಣಿಗೆ ಸಂಬಂಧಿಸಿದಂತೆ ಕೇಂದ್ರೀಯ ಭವಿಷ್ಯ ನಿಧಿ ಪ್ರಾಧಿಕಾರವು ಹೊರಡಿಸಿದ ಸುತ್ತೋಲೆಯಿಂದ ಪಿಂಚಣಿದಾರರ ಹಿತಾಸಕ್ತಿಗೆ ಧಕ್ಕೆಯಾಗಿದೆ. ಸುಪ್ರೀಂ ಕೋರ್ಟಿನ ತೀರ್ಪಿನ ಅನುಸಾರ ಪಿಂಚಣಿ ನೀಡಬೇಕು’ ಎಂದು ನಿವೃತ್ತ ನೌಕರರು ಆಗ್ರಹಿಸಿದರು.

ಕೇಂದ್ರೀಯ ಭವಿಷ್ಯ ನಿಧಿ ಪ್ರಾಧಿಕಾರವು ಕರೆದಿದ್ದ ಇಪಿಎಸ್-95 ನಿವೃತ್ತ ನೌಕರರ ಪಿಂಚಣಿ ಅದಾಲತ್‌ನಲ್ಲಿ ಎನ್ಎಸಿ, ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿಯ ನಿವೃತ್ತ ನೌಕರರು ಭಾಗವಹಿಸಿ, ಪ್ರತಿಭಟನಾ ಸಭೆ ನಡೆಸಿದರು.

‘ಕೇಂದ್ರೀಯ ಭವಿಷ್ಯ ನಿಧಿ ಪ್ರಾಧಿಕಾರ ಹೊರಡಿಸಿರುವ ಸುತ್ತೋಲೆ ನಿವೃತ್ತರ ಪಾಲಿಗೆ ಮೃತ್ಯುಕೂಪವಾಗಿದೆ. ಅದನ್ನು ಕೂಡಲೇ ವಾಪಸ್ ಪಡೆದು, ಸುಪ್ರೀಂ ಕೋರ್ಟಿನ ತೀರ್ಪಿನ ಅನುಸಾರ ಪಿಂಚಣಿ ನೀಡಬೇಕು. ಅರ್ಜಿ ಸಲ್ಲಿಸುವ ಸರಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಸೂಕ್ತ ರೀತಿಯಲ್ಲಿ ಪ್ರಕಟಿಸಬೇಕು’ ಎಂದು ನಿವೃತ್ತ ನೌಕರ ನಂಜುಂಡೇಗೌಡ ಆಗ್ರಹಿಸಿದರು.

ADVERTISEMENT

‘ಇಳಿ ವಯಸ್ಸಿನಲ್ಲಿರುವ ನಿವೃತ್ತರ ಬಗ್ಗೆ ಸರ್ಕಾರ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಗಮನ ಹರಿಸಿಸುತ್ತಿಲ್ಲ. ಹೀಗಾಗಿ, ನಿವೃತ್ತರ ಬದುಕು ಅತ್ಯಂತ ಶೋಚನಿಯವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ, ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಶಂಕರ್ ಕುಮಾರ್ ಒತ್ತಾಯಿಸಿದರು.

‘ಕನಿಷ್ಠ ಪಿಂಚಣಿ ₹ 7,500, ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ನೀಡುವ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವೆಲ್ಲರೂ ವಿವಿಧತೆಯಲ್ಲಿ ಏಕತೆ ಕಾಣಬೇಕು. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು’ ಎಂದು ಎನ್ಎಸಿ ಅಧ್ಯಕ್ಷ ಜಿಎಸ್ಎಂ ಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.