ADVERTISEMENT

32 ಬಾರಿ ಚಾಕುವಿನಿಂದ ಇರಿದು ಸುಲಿಗೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 17:10 IST
Last Updated 28 ಏಪ್ರಿಲ್ 2022, 17:10 IST

ಬೆಂಗಳೂರು: ಮಡಿವಾಳ ಠಾಣೆಯ ವ್ಯಾಪ್ತಿಯಲ್ಲಿ ಕ್ಯಾಬ್‌ ಚಾಲಕನಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿ ಪರಾರಿಯಾಗಿದ್ದ ಇಬ್ಬರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಬೊಮ್ಮನಹಳ್ಳಿಯಿಂದ ಮಡಿವಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಏಪ್ರಿಲ್ 17ರಂದು ಹೊರಟಿದ್ದ ಕ್ಯಾಬ್ ತಡೆದಿದ್ದ ಆರೋಪಿಗಳು, ಚಾಲಕನಿಗೆ 32 ಬಾರಿ ಚಾಕುವಿನಿಂದ ಇರಿದಿದ್ದರು. ನಂತರ, ₹ 12 ಸಾವಿರ ಸುಲಿಗೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಗಾಯಾಳು ಚಾಲಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದೂ ತಿಳಿಸಿದರು.

ADVERTISEMENT

ಗುಜರಾತ್‌ನಲ್ಲಿ ಆರೋಪಿಗಳು: ‘ಪ್ರಯಾಣಿಕರ ಸೋಗಿನಲ್ಲಿ ಕೃತ್ಯ ಎಸಗಿದ್ದ ಆರೋಪಿಗಳು, ಹಿಂದಿ ಮಾತನಾಡುತ್ತಿದ್ದ ಬಗ್ಗೆ ಚಾಲಕ ಮಾಹಿತಿ ನೀಡಿದ್ದರು. ಹೊರರಾಜ್ಯದ ವ್ಯಕ್ತಿಗಳು ಕೃತ್ಯ ಎಸಗಿದ್ದ ಅನುಮಾನ ಬಂದಿತ್ತು. ಅದೇ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಕೃತ್ಯ ಎಸಗಿದ ನಂತರ ಆರೋಪಿಗಳು ಗುಜರಾತ್‌ಗೆ ಹೋಗಿರುವ ಮಾಹಿತಿ ಸಿಕ್ಕಿತ್ತು. ಅವರ ವಿಳಾಸ ಪತ್ತೆ ಮಾಡಿದ್ದ ವಿಶೇಷ ತಂಡ, ಸ್ಥಳಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಇಬ್ಬರೂ ಆರೋಪಿಗಳು ಬಾಲಕರು. ಹೀಗಾಗಿ, ಅವರನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.