ADVERTISEMENT

₹ 30 ಲಕ್ಷ ಮೌಲ್ಯದ ವಾಹನ, ಮೊಬೈಲ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 18:54 IST
Last Updated 22 ಜನವರಿ 2021, 18:54 IST
ಮುಬಾರಕ್
ಮುಬಾರಕ್   

ಬೆಂಗಳೂರು: ವಾಹನ ಕಳವು ಹಾಗೂ ಸುಲಿಗೆ ಪ್ರಕರಣದಲ್ಲಿ ಮುಬಾರಕ್ ಅಲಿಯಾಸ್ ಸಿದ್ದಿಕ್ (30) ಎಂಬಾತನನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನೀಲಸಂದ್ರ ಬಳಿಯ ಎಲ್‌.ಆರ್.ನಗರದ ನಿವಾಸಿ ಮುಬಾರಕ್, ಸಹಚರರ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ. ಆತನಿಂದ ಕಾರು, 11 ದ್ವಿಚಕ್ರ ವಾಹನಗಳು, 2 ಲ್ಯಾಪ್‌ಟಾಪ್ ಹಾಗೂ 31 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯದ ₹ 30 ಲಕ್ಷ’ ಎಂದು ಪೊಲೀಸರು ಹೇಳಿದರು.

‘ಜ. 17ರಂದು ರಾತ್ರಿ ಆರೋಪಿ ದ್ವಿಚಕ್ರ ವಾಹನದಲ್ಲಿ ಜೆ.ಸಿ.ನಗರದ ಮುಖ್ಯರಸ್ತೆಯಲ್ಲಿ ಹೊರಟಿದ್ದ. ಆತನ ಬಗ್ಗೆ ಅನುಮಾನಗೊಂಡಿದ್ದ ಗಸ್ತಿನಲ್ಲಿದ್ದ ಸಿಬ್ಬಂದಿ, ತಡೆಯಲು ಮುಂದಾಗಿದ್ದರು. ವಾಹನ ನಿಲ್ಲಿಸದ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಸಿಬ್ಬಂದಿ ಆತನನ್ನು ಬೆನ್ನಟ್ಟಿ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗಲೇ ಕೃತ್ಯಗಳು ಬಯಲಾಗಿವೆ. ಸಹಚರರು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ADVERTISEMENT

‘ಕದ್ದ ದ್ವಿಚಕ್ರ ವಾಹನಗಳಲ್ಲೇ ರಾತ್ರಿ ಸುತ್ತಾಡುತ್ತಿದ್ದ ಆರೋಪಿಗಳು, ದಾರಿಹೋಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಕಳೆದ ನವೆಂಬರ್ 5ರಂದು ಇಮ್ಯಾನ್ಯುಯಲ್ ಎಂಬುವರ ₹ 35 ಸಾವಿರವನ್ನು ಕದ್ದುಕೊಂಡು ಆರೋಪಿಗಳು ಪರಾರಿಯಾಗಿದ್ದರು.’

‘ವಿದ್ಯಾರಣ್ಯಪುರ, ಅತ್ತಿಬೆಲೆ, ಜೆ.ಜೆ.ನಗರ, ಇಂದಿರಾನಗರ ಹಾಗೂ ಸಂಜಯನಗರ ಠಾಣೆ ವ್ಯಾಪ್ತಿಗಳಲ್ಲೂ ಆರೋಪಿಗಳು ಕೃತ್ಯ ಎಸಗಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.