ರಾಜರಾಜೇಶ್ವರಿ ನಗರ: ‘ಉಲ್ಲಾಳು ವಾರ್ಡ್ ವಿನಾಯಕ ಲೇಔಟ್ನ 1ನೇ ಮುಖ್ಯ ರಸ್ತೆಯಲ್ಲಿ (ಅಮ್ಮ ಆಶ್ರಮದ ಹಿಂಭಾಗ) ಬೃಹದಾಕಾರವಾಗಿ ಬೆಳೆದಿರುವ ಮರದ ಬೇರುಗಳಿಂದ ಒಳಚರಂಡಿಗೆ(ಡ್ರೈನೇಜ್) ತೊಂದರೆಯಾಗುತ್ತಿದೆ’ ಎಂದು ಸ್ಥಳೀಯ ನಾಗರಿಕರು ತಿಳಿಸಿದ್ದಾರೆ.
‘ಮರದ ಬೇರುಗಳು ಒಳಚರಂಡಿಗೆ ಹಾನಿ ಮಾಡುತ್ತಿರುವ ಕುರಿತು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳಿಗೆ ದೂರು ನೀಡಿದ್ದೆವು. ಆದರೂ, ಸಮಸ್ಯೆ ಬಗೆಹರಿದಿಲ್ಲ’ ಎಂದು ನಾಗರಿಕರು ದೂರಿದರು.
ಮರದ ಪಕ್ಕದಲ್ಲೇ ಒಳಚರಂಡಿ, ಕುಡಿಯುವ ನೀರಿನ ಕೊಳವೆಗಳು ಹಾದು ಹೋಗಿವೆ. ಬೇರುಗಳು ವಿಸ್ತರಿಸುತ್ತಿರುವುದರಿಂದ ನೀರಿನ ಕೊಳವೆ ಒಡೆದು ಹೋಗುತ್ತಿದೆ. ಸುತ್ತಮುತ್ತಲಿನವರು ಸ್ವಂತ ಹಣ ಖರ್ಚು ಮಾಡಿ ಹಲವಾರು ಬಾರಿ ಕೊಳವೆಯನ್ನು ದುರಸ್ತಿ ಮಾಡಿಸಿದ್ದಾರೆ. ಆದರೂ, ಪದೇ ಪದೇ ಕೊಳವೆ ಒಡೆದು ಹೋಗುತ್ತಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸಿ.ಎಚ್.ಕೃಷ್ಣಮೂರ್ತಿ.
ಮಳೆ ಸುರಿದಾಗ, ಗಾಳಿ ಬೀಸಿದಾಗ ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಾಕುತ್ತದೆ. ಇದೂ ಕೂಡ ಅಪಾಯವೇ. ಈ ಎಲ್ಲ ವಿಷಯಗಳನ್ನು ಬಿಬಿಎಂಪಿಗೆ ತಿಳಿಸಿದ್ದೇವೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಾಗರಿಕರು ದೂರಿದರು.
ಈ ಸಂಬಂಧ ಪ್ರತಿಕ್ರಿಯೆಗಾಗಿ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಯನ್ನು ಸಂಪರ್ಕಿಸಿದಾಗ ಅವರು ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.