ADVERTISEMENT

ರೋಟರಿ ಸಂಸ್ಥೆಯಿಂದ ಶಾನುಭೋಗನಹಳ್ಳಿ ಕೆರೆ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:50 IST
Last Updated 11 ಜನವರಿ 2021, 2:50 IST
ರೋಟರಿ ಸಂಸ್ಥೆ ಅಭಿವೃದ್ದಿ ಪಡಿಸುತ್ತಿರುವ ಶಾನುಭೋಗನಹಳ್ಳಿ ಗ್ರಾಮದ ಕೆರೆಯ ನೋಟ
ರೋಟರಿ ಸಂಸ್ಥೆ ಅಭಿವೃದ್ದಿ ಪಡಿಸುತ್ತಿರುವ ಶಾನುಭೋಗನಹಳ್ಳಿ ಗ್ರಾಮದ ಕೆರೆಯ ನೋಟ   

ಹೆಸರಘಟ್ಟ: ರೋಟರಿ ಕ್ಲಬ್‌, ಬೆಂಗಳೂರು ಗ್ರೀನ್ ಪಾರ್ಕ್ ವತಿಯಿಂದ ಹಮ್ಮಿಕೊಂಡಿದ್ದ ಶಾನುಭೋಗನಹಳ್ಳಿ ಕೆರೆ ಪುನಶ್ಚೇತನ ಕಾರ್ಯಕ್ಕೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.

‘ಕೆರೆಯನ್ನು ಅಭಿವೃದ್ದಿ ಪಡಿಸಲು ಖಾಸಗಿ ಸಂಸ್ಥೆಯು ಮುಂದೆ ಬಂದಿರುವುದು ಶ್ಲಾಘನಾರ್ಹ. ಕೆರೆ ಉಳಿದರೆ ನೂರಾರು ಜೀವ ಸಂಕುಲಗಳಿಗೆ ನೆಲೆಯಾಗುತ್ತದೆ. ಗ್ರಾಮಸ್ಥರಿಗೆ ಶುದ್ಧ ನೀರು ಮತ್ತು ಶುದ್ಧ ಗಾಳಿ ಸಿಗುತ್ತದೆ’ ಎಂದರು.

‘ಕೆರೆಯನ್ನು ಮೂರು ಹಂತಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಮೊದಲು, ಕೆರೆಯಲ್ಲಿರುವ ಹೂಳನ್ನು ತೆಗೆದು ನೀರು ಸಂಗ್ರಹವಾಗುವಂತೆ ಮಾಡಲಾಗುವುದು. ನಂತರ, ಕೆರೆಯ ಮಣ್ಣನ್ನು ಕೃಷಿಕರ ತೋಟಗಳಿಗೆ ನೀಡಲಾಗುವುದು. ಇದರಿಂದ ಕೃಷಿ ಭೂಮಿ ಫಲವತ್ತತೆ ಪಡೆದುಕೊಳ್ಳುತ್ತದೆ. ಮೂರನೇ ಹಂತದಲ್ಲಿ, ಕೆರೆಯ ನೀರಿನ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುವುದು’ ಎಂದು ರೋಟರಿ ಕ್ಲಬ್‌ ಸದಸ್ಯ ಮಂಜುನಾಥ್ ತಿಳಿಸಿದರು.

ADVERTISEMENT

‘ಈ ಕೆರೆಯು 14 ಎಕರೆ ವಿಸ್ತಾರ ಹೊಂದಿದೆ. ಕೆರೆ ದಡದಲ್ಲಿ ನೂರಾರು ರೈತರು ತರಕಾರಿ, ರಾಗಿ ಮತ್ತು ಮೆಕ್ಕೆಜೋಳ ಬೆಳೆಯುತ್ತಾರೆ. ಮಳೆಗಾಲದಲ್ಲಿ ಬಂದ ನೀರು ಕೆರೆಯಲ್ಲಿ ಹೆಚ್ಚು ದಿನಗಳ ಕಾಲ ಸಂಗ್ರಹವಾಗುತ್ತಿಲ್ಲ. ಇದರಿಂದ ಈ ಭಾಗದ ರೈತರಿಗೆ ಹೆಚ್ಚು ನಷ್ಟವಾಗುತ್ತಿದೆ. ಕೆರೆ ಅಭಿವೃದ್ಧಿಯಾದರೆ ಇಲ್ಲೊಂದು ಜೀವ ಸಂಕುಲವೇ ತೆರೆದುಕೊಳ್ಳುತ್ತದೆ’ ಎಂದು ನೂತನ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಗೌಡ ಎಸ್.ಎಂ. ಹೇಳಿದರು.

ಕರ್ನಾಟಕ ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಕರಿಗೌಡ, ಬೆಂಗಳೂರು ಗ್ರೀನ್ ಪಾರ್ಕ್ ಅಧ್ಯಕ್ಷ ರಮೇಶ್ ಉಪಸ್ಥಿತರಿದ್ದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.