ರಾಜರಾಜೇಶ್ವರಿನಗರ:ಹೊರವರ್ತುಲ ರಸ್ತೆಯ ಡಾ.ರಾಜ್ಕುಮಾರ್ ಸಮಾಧಿ ಬಳಿ ನಿರ್ಮಿಸಲಾದ ಅಂಡರ್ಪಾಸ್ ಅನ್ನು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಶಾಸಕ ಮುನಿರತ್ನ ಬುಧವಾರ ಉದ್ಘಾಟಿಸಿದರು.
‘ಈ ಭಾಗದಲ್ಲಿ ರಸ್ತೆ ದಾಟಲು ಜನ ಕಷ್ಟಪಡುತ್ತಿದ್ದರು. ಈ ಸ್ಥಳ ಅಪಘಾತದ ತಾಣವಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ ಈ ಸ್ಥಳದಲ್ಲಿ ನಾಲ್ಕು ಜನ ಮೃತಪಟ್ಟಿದ್ದರು. ಇಲ್ಲಿನ ಪರಿಸ್ಥಿತಿ ಗಮನಿಸಿದ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರೋತ್ಥಾನ ನಿಧಿಯಿಂದ ₹ 1.23 ಕೋಟಿ ಅನುದಾನ ನೀಡಿದ್ದರು. ಅಂಡರ್ಪಾಸ್ ನಿರ್ಮಾಣದಿಂದ ಇಲ್ಲಿನ ಜನರು ನಿರಾಳವಾಗಿದ್ದಾರೆ’ ಎಂದು ಶಾಸಕ ಮುನಿರತ್ನ ಹೇಳಿದರು.
‘ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್ ಬಳಿ ಜನಸಂದಣಿ ದುಪ್ಪಟ್ಟಾಗಿದ್ದು, ರಸ್ತೆ ದಾಟಲು ಕಷ್ಟವಾಗುತ್ತಿದೆ. ಆ ವ್ಯಾಪ್ತಿಯಲ್ಲಿಯೂ ಅಂಡರ್ಪಾಸ್ ನಿರ್ಮಿಸಲು ಅನುಮತಿ ಪಡೆಯಲು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು’ ಎಂದರು.
ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ವೇಲುನಾಯ್ಕರ್ ಮಾತನಾಡಿ, ‘ಲಕ್ಷ್ಮೀದೇವಿ ನಗರ ಮತ್ತು ನಂದಿನಿ ಬಡಾವಣೆ ನಾಗರಿಕರಿಗೆ ತೊಂದರೆಯಾಗದಂತೆ ಮೇಲುಸೇತುವೆ, ಅಂಡರ್ಪಾಸ್ ರಸ್ತೆ ಹಾಗೂ ಸಾವಿರ ಜನರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಟ್ಟು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಲಾಗಿದೆ’ ಎಂದರು.
ಉಪಮೇಯರ್ ಭದ್ರೇಗೌಡ, ಜಂಟಿ ಆಯುಕ್ತ ಎಚ್.ಬಾಲಶೇಖರ್, ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್, ಪಾಲಿಕೆ ಸದಸ್ಯ ರಾಜೇಂದ್ರಕುಮಾರ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.