ADVERTISEMENT

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣ:12 ಮಂದಿಗೆ ಜೀವಾವಧಿ ಶಿಕ್ಷೆ

l ₹25 ಸಾವಿರ ದಂಡ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 20:25 IST
Last Updated 29 ಅಕ್ಟೋಬರ್ 2020, 20:25 IST

ಬೆಂಗಳೂರು: ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದ 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ, ನಗರದ 59ನೇ ಸಿಸಿಎಚ್ ನ್ಯಾಯಾಲಯ ಆದೇಶಿಸಿದೆ.

ಆಜಾದ್‍ ನಗರದ ಮಾಜಿ ಕಾರ್ಪೊರೇಟರ್ ಗೌರಮ್ಮ, ಪತಿ ಸಿ.ಗೋವಿಂದ ರಾಜು ಹಾಗೂ ರಂಗಸ್ವಾಮಿ, ಆರ್.ಶಂಕರ್, ರಾಘವೇಂದ್ರ, ಚಂದ್ರ, ಶಂಕರ್, ಉಮಾಶಂಕರ್, ವೇಲು, ಲೋಗನಾಥ್, ಜಹೀರ್, ಸುರೇಶ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

2012ರ ಡಿಸೆಂಬರ್‌ನಲ್ಲಿ ಚಾಮರಾಜಪೇಟೆಯ ಬಿಎಂಕೆ ಬಡಾವಣೆಯಲ್ಲಿ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆಯಾಗಿತ್ತು. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್, ತನಿಖೆಗೆ ವಿಶೇಷ ತನಿಖಾ ದಳ (ಎಸ್‍ಐಟಿ) ನೇಮಿಸಲು ಸರ್ಕಾರಕ್ಕೆ ಸೂಚಿಸಿತ್ತು. ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಅಬ್ದುಲ್ ಅಹದ್ ನೇತೃತ್ವದ ಎಸ್‍ಐಟಿ ತಂಡ ಪ್ರಕರಣದ ತನಿಖೆ ನಡೆಸಿ, 12 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಕಾರ್ಪೊರೇಟರ್‌ ಆಗಿದ್ದ ವೇಳೆ ಗೌರಮ್ಮ ಹಾಗೂ ಪತಿಯ ಅಕ್ರಮ ಯೋಜನೆಗಳನ್ನು ಲಿಂಗರಾಜು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಲಿಂಗರಾಜು ಮೇಲೆ ಗೌರಮ್ಮಗೆ ದ್ವೇಷ ಇತ್ತು. ಈ ಕಾರಣಕ್ಕೆ ಪತಿ ಗೋವಿಂದ ರಾಜು ಹಾಗೂ ಈಕೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು ಎಂದು ತನಿಖೆಯಲ್ಲಿ ದೃಢಪಟ್ಟಿತ್ತು.

ಈ ಕುರಿತ ಸಾಕ್ಷ್ಯಾಧಾರಗಳನ್ನು ಆಧರಿಸಿ 12 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ, 59ನೇ ಸಿಸಿಎಚ್ ಕೋರ್ಟ್‌ ನ್ಯಾಯಾಧೀಶ ಲಕ್ಷ್ಮೀನಾರಾಯಣ ಅವರು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.