ಬೆಂಗಳೂರು: ನೀವಿನ್ನೂ ಮನೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿಲ್ಲವೇ? ಹಾಗಾದರೆ ಹೆಚ್ಚು ನೀರಿನ ಬಿಲ್ ಪಾವತಿಸಲು ಸಿದ್ಧರಾಗಿ. ಸಾಕಷ್ಟು ಬಾರಿ ಸೂಚನೆ ನೀಡಿದ ಬಳಿಕವೂ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳದ ಗ್ರಾಹಕರಿಗೆ ನೀರಿನ ಬಿಲ್ ಮೇಲೆ ವಿಧಿಸುತ್ತಿರುವ ದಂಡದ ಪ್ರಮಾಣವನ್ನು ಶೇ 50ರಷ್ಟು ಹೆಚ್ಚಳ ಮಾಡಲು ಜಲಮಂಡಳಿ ಬುಧವಾರ ನಿರ್ಧರಿಸಿದೆ.
ಗೃಹಬಳಕೆ ಗ್ರಾಹಕರಿಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಶೇ 50ರಷ್ಟು ಹಾಗೂ ವಾಣಿಜ್ಯ ಬಳಕೆಯ ಗ್ರಾಹಕರಿಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಶೇ 100ರಷ್ಟು ಹೆಚ್ಚಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.
ನಗರದ ಎಲ್ಲ ಕಟ್ಟಡಗಳಲ್ಲೂ ಮಳೆ ನೀರು ಸಂಗ್ರಹ ಮಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದ್ದರಿಂದ ಮಂಡ
ಳಿಯ ಈ ನಿರ್ಧಾರ ಜಾರಿಗೊಳಿಸಲು ಸರ್ಕಾರದ ಹೊಸ ಆದೇಶಕ್ಕಾಗಿ ಕಾಯಬೇಕಿಲ್ಲ. ಅದಕ್ಕಾಗಿ ಆದಷ್ಟು ಬೇಗ ಅಧಿಸೂಚನೆ ಪ್ರಕಟಿಸಲಿದ್ದೇವೆ’ ಎಂದು ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದರು.
‘ಗ್ರಾಹಕರಿಗೆ ಕಿರುಕುಳ ನೀಡುವುದು ನಮ್ಮ ಉದ್ದೇಶವಲ್ಲ. ಮಳೆ ನೀರು ಸಂಗ್ರಹಕ್ಕೆ ಇನ್ನಾದರೂ ಕ್ರಮ ಕೈಗೊಳ್ಳಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆ. ನೀರು ಸಂಗ್ರಹಿಸಲು ನೆಲದಲ್ಲಿ ಯಾವ ರೀತಿ ತೊಟ್ಟಿ ನಿರ್ಮಿಸಬೇಕು, ಓವರ್ ಹೆಡ್ ಟ್ಯಾಂಕ್ ನಿರ್ಮಿ
ಸುವುದಾದರೆ ಅದರ ವಿನ್ಯಾಸ ಹೇಗಿರಬೇಕು ಎಂಬ ಕುರಿತ ವಿವರಗಳನ್ನು ಮಂಡಳಿಯ ವೆಬ್ಸೈಟ್ನಲ್ಲಿ ಒದಗಿಸಲಾಗಿದೆ.ಇನ್ನೇನು ಮಳೆಗಾಲ ಆರಂಭ. ಇನ್ನಾದರೂ ಮಳೆ ನೀರನ್ನು ಸದುಪಯೋಗಪಡಿಸಿಕೊಳ್ಳಲು ಜನ ಮುಂದಾಗಬೇಕು’ ಎಂದು ಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದರು.
‘ಜನನಿಬಿಡ ಪ್ರದೇಶದಲ್ಲೂ ಕಡ್ಡಾಯ’
‘ರಾಜಾಜಿನಗರ, ಮೆಜೆಸ್ಟಿಕ್ನಂತಹ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳು ಒಂದಕ್ಕೊಂದು ತಾಗಿಕೊಂಡಂತೆ ಇವೆ. ಇಂತಹ ಕಡೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸುವುದು ಕಷ್ಟಸಾಧ್ಯ. ಆದರೆ, ಇಂತಹ ಕಡೆಯೂ ಪ್ರತಿ ಕಟ್ಟಡದಲ್ಲೂ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿರುವುದನ್ನು ಖಾತರಿಪಡಿಸಿಕೊಳ್ಳಲು ಮಂಡಳಿ ಮುಂದಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.