ADVERTISEMENT

ಎಸ್‌. ಮೂರ್ತಿ ಅಮಾನತು ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:15 IST
Last Updated 9 ಜನವರಿ 2019, 19:15 IST

ಬೆಂಗಳೂರು: ವಿಧಾನಸಭೆಯ ಕಾರ್ಯದರ್ಶಿ ಎಸ್‌.ಮೂರ್ತಿ ಅವರ ಅಮಾನತು ತೆರವು ಮಾಡಬೇಕು ಎಂದು ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ಒತ್ತಾಯಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಹಾಗೂ ವಿಧಾನ ಪರಿಷತ್‌ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದೆ.

‘2016 ಹಾಗೂ 2017ರ ಬೆಳಗಾವಿ ಅಧಿವೇಶನದ ವೇಳೆ ಕೆ.ಬಿ.ಕೋಳಿವಾಡ ವಿಧಾನಸಭಾಧ್ಯಕ್ಷರಾಗಿದ್ದರು. ಅವರ ಸೂಚನೆ, ಅನುಮೋದನೆ ಹಾಗೂ ಮಾರ್ಗದರ್ಶನದಂತೆ ಮೂರ್ತಿ ನಡೆದುಕೊಂಡಿದ್ದಾರೆ. ಕಾರ್ಯದರ್ಶಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಈ ಖರ್ಚು ವೆಚ್ಚಗಳ ದಾಖಲೆಗಳನ್ನು ಸಿಎಜಿ ಲೆಕ್ಕಪರಿಶೋಧನೆ ನಡೆಸಿದ್ದಾರೆ. ಯಾವುದೇ ಗಂಭೀರ ಷರಾಗಳನ್ನು ವರದಿಯಲ್ಲಿ ಬರೆದಿಲ್ಲ. ಹೀಗಿದ್ದರೂ, ಈಗಿನ ಸಭಾಧ್ಯಕ್ಷರಾದ ಕೆ.ಆರ್‌.ರಮೇಶ್‌ ಕುಮಾರ್ ದುರುದ್ದೇಶದಿಂದ, ತಮ್ಮದೇ ಸಮುದಾಯಕ್ಕೆ ಸೇರಿದ ಎಂ.ಕೆ.ವಿಶಾಲಾಕ್ಷಿ ಅವರನ್ನು ಕಾರ್ಯದರ್ಶಿ ಹುದ್ದೆಗೆ ತರಬೇಕು ಎಂಬ ಉದ್ದೇಶದಿಂದ ಅಮಾನತು ಮಾಡಿದ್ದಾರೆ. ಇದು ಜಾತಿವಾದದ ಕ್ರೌರ್ಯ’ ಎಂದು ದೂರಿದೆ.

ADVERTISEMENT

‘ವ್ಯಕ್ತಿಗತವಾಗಿ ಪ್ರಗತಿಪರರು ಹಾಗೂ ಸದನದಲ್ಲಿ ಮಹಾಮಾನವತಾವಾದಿ ಎಂದೇ ಹೆಸರು ಪಡೆದಿರುವ ರಮೇಶ್‌ ಕುಮಾರ್‌ ಅವರಿಂದ ಇಂತಹ ದಲಿತ ವಿರೋಧಿ ಕೃತ್ಯ ಉಂಟಾಗಿರುವುದು ಜಾತ್ಯತೀತ ಸರ್ಕಾರಕ್ಕೆ ಶೋಭೆ ತರುವಂತಹುದು ಅಲ್ಲ. ಈ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.