ADVERTISEMENT

ಹಗರಣಗಳ ಹಿಂದೆ ಭ್ರಷ್ಟರ ಅಧಿಕಾರದ ದರ್ಪ

ವೆಚ್ಚ ಲೆಕ್ಕಿಗರ ಸಮಾವೇಶದಲ್ಲಿ ನ್ಯಾ.ಸಂತೋಷ್ ಹೆಗ್ಡೆ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 23:33 IST
Last Updated 22 ಫೆಬ್ರುವರಿ 2020, 23:33 IST
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಗೌರವಿಸಲಾಯಿತು. ಬೆಂಗಳೂರು ಘಟಕದ ಅಧ್ಯಕ್ಷ ಎಚ್.ಆರ್.ಶ್ರೀಪಾದ್, ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಸತೀಶ್, ಜಿ.ಎನ್.ವೆಂಕಟ ರಾಮನ್‌, ಎಫ್‌ಕೆಸಿಸಿಐ ಅಧ್ಯಕ್ಷ ಜನಾರ್ದನ ಹಾಗೂ ಎ.ವಿ.ಎಸ್.ಎನ್.ಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರನ್ನು ಗೌರವಿಸಲಾಯಿತು. ಬೆಂಗಳೂರು ಘಟಕದ ಅಧ್ಯಕ್ಷ ಎಚ್.ಆರ್.ಶ್ರೀಪಾದ್, ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಸತೀಶ್, ಜಿ.ಎನ್.ವೆಂಕಟ ರಾಮನ್‌, ಎಫ್‌ಕೆಸಿಸಿಐ ಅಧ್ಯಕ್ಷ ಜನಾರ್ದನ ಹಾಗೂ ಎ.ವಿ.ಎಸ್.ಎನ್.ಮೂರ್ತಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ನಡೆದ ದೊಡ್ಡ ಹಗರಣಗಳ ಹಿಂದೆ ಭ್ರಷ್ಟರ ಅಧಿಕಾರದ ದರ್ಪ ಹಾಗೂ ದುರಾಸೆ ಅಡಗಿತ್ತು. ಈ ವೇಳೆ ದೇಶದ ಅಭಿವೃದ್ಧಿಗಿಂತ ಹಗರಣಗಳ ಪ್ರಮಾಣವನ್ನು ಬಿಂಬಿಸುವ ಅಂಕೆಯ ಸೊನ್ನೆಗಳು ಅಭಿವೃದ್ಧಿಯಾಗಿದ್ದೇ ಹೆಚ್ಚು’ ಎಂದುಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯ ಬೆಂಗಳೂರು ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ವೆಚ್ಚ ಲೆಕ್ಕಿಗರ ಸಮಾವೇಶದಲ್ಲಿ ‘ಸಾಮಾಜಿಕ ಮೌಲ್ಯಗಳ ಕುಸಿತ–ಅದರ ಪರಿಣಾಮಗಳು’ ಕುರಿತು ಅವರು ಮಾತನಾಡಿದರು.

‘ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣವನ್ನು ಹಗರಣಗಳ ಮೂಲಕ ನುಂಗಿ ಹಾಕಿದ್ದಾರೆ. ಈ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದನ್ನು ವೆಚ್ಚ ಲೆಕ್ಕಿಗರೇಮುಂದೊಂದು ದಿನ ಹೇಳಬೇಕಾಗುತ್ತದೆ’ ಎಂದರು.

ADVERTISEMENT

ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ,‘ದೇಶದಲ್ಲಿ ಎದುರಾಗಿರುವ ಬಿಕ್ಕಟ್ಟುಗಳಿಂದ ಜಿಡಿಪಿ ಕುಸಿತ ಕಂಡಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿದೆ. ಜಿಎಸ್‍ಟಿ ಜಾರಿ ಬಳಿಕ ವ್ಯಾಪಾರಿಗಳಿಗೆ ಅನುಕೂಲವಾಗಿದ್ದು, ತೆರಿಗೆ ಸಂಗ್ರಹಣೆ ಸುಧಾರಣೆಯಾಗುತ್ತಿದೆ. ನೋಟು ರದ್ದತಿ ಬಳಿಕ ದೇಶದಲ್ಲಿ ಕಪ್ಪು ಹಣ ನಿಯಂತ್ರಣಕ್ಕೆ ಬಂದು, ಭ್ರಷ್ಟಾಚಾರವೂ ಕಡಿಮೆಯಾಗಿದೆ’ ಎಂದು ವಿವರಿಸಿದರು.

‘ಚಿಕ್ಕ ದೇಶಗಳಲ್ಲೇ ನೋಟು ರದ್ದತಿ ಸವಾಲಿನ ಮಾತು. ಇನ್ನು 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕತೆ ನಿಭಾಯಿಸುವುದು ಸುಲಭದ ಮಾತಲ್ಲ. ಈ ಸವಾಲು ಸ್ವೀಕರಿಸಿ ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕತೆಗೆ ಹೊಸ ಆಯಾಮ ನೀಡಿ ದಿಟ್ಟತನ ತೋರಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.