ಬೆಂಗಳೂರು: ‘₹ 25 ಲಕ್ಷ ಮೌಲ್ಯದ 300 ರೇಷ್ಮೆ ಸೀರೆ ಖರೀದಿ ಮಾಡಿರುವ ಶಶಿಕಲಾ ಹಾಗೂ ಇತರರು, ಹಣ ಕೇಳಿದ್ದಕ್ಕೆ ರೌಡಿಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಸೀರೆ ವ್ಯಾಪಾರಿ ಪಿ. ಕೃಷ್ಣ ಎಂಬುವರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾರೆ.
‘ಚಿತ್ತೂರು ನಿವಾಸಿ ಆಗಿರುವ ಕೃಷ್ಣಪ್ಪ ಅವರ ದೂರು ಆಧರಿಸಿ ಸುಬ್ಬಯ್ಯನಪಾಳ್ಯದ ಚೌಡೇಶ್ವರಿ ಲೇಔಟ್ನ ಶಶಿಕಲಾ, ಆನಂದ ರೆಡ್ಡಿ ಹಾಗೂ ಗಣೇಶ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನನಗೆ ಕರೆ ಮಾಡಿದ್ದ ಶಶಿಕಲಾ, ರೇಷ್ಮೆ ಸೀರೆ ಬೇಕೆಂದು ಹೇಳಿದ್ದರು. 300 ರೇಷ್ಮೆ ಸೀರೆಗಳನ್ನು ತೆಗೆದುಕೊಂಡುಚೌಡೇಶ್ವರಿ ಲೇಔಟ್ಗೆ ಹೋಗಿದ್ದೆ. ಹಣ ತರುವುದಾಗಿ ಹೇಳಿ ಸೀರೆ ಸಮೇತ ಹೋದ ಆರೋಪಿಗಳು, ರಾತ್ರಿಯಾದರೂ ವಾಪಸು ಬಂದಿರಲಿಲ್ಲ. ಕರೆ ಮಾಡಿ ಕೇಳಿದಾಗ ನಾಳೆ ಬರುವಂತೆ ಹೇಳಿದ್ದರು. ಮರುದಿನ ಹೋದಾಗ ಹಣ ಕೊಡುವುದಿಲ್ಲವೆಂದು ಹೇಳಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಕೃಷ್ಣ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.