ಬೆಂಗಳೂರು: ‘ಮಹನೀಯರ ಹೆಸರು ಶಾಶ್ವತವಾಗಿ ಉಳಿಯಲು ಹಾಗೂ ಮುಂದಿನ ಪೀಳಿಗೆಗೆ ಅವರ ಕೊಡುಗೆಗಳನ್ನು ತಿಳಿಸಲು ಗೋವಿಂದ ರಾಜನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿ ಹಾಗೂ ಯೋಜನೆಗಳಿಗೆ ಮಹನೀಯರ ಹೆಸರನ್ನು ಇಡಲಾಗುತ್ತಿದೆ’ ಎಂದು ಸ್ಥಳೀಯ ಶಾಸಕರೂ ಆಗಿರುವ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಗೋವಿಂದರಾಜನಗರದಲ್ಲಿ ನಿರ್ಮಾಣವಾಗಿರುವ ಎಂ. ಚಿದಾನಂದಮೂರ್ತಿ ಸಭಾಂಗಣವನ್ನು ಈಚೆಗೆ ಉದ್ಘಾಟಿಸಿದ ಅವರು, ‘ಕ್ಷೇತ್ರದಲ್ಲಿನ ಕಾಮಗಾರಿ, ಯೋಜನೆಗಳಿಗೆ ಬಸವೇಶ್ವರ, ದಾಸಶೇಷ್ಠ ಕನಕದಾಸ, ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡ, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಅಟಲ್ ಬಿಹಾರಿ ವಾಜಪೇಯಿ, ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಸ್ವಾಮೀಜಿ ಸೇರಿ ವಿವಿಧ ಮಹನೀಯರ ಹೆಸರನ್ನು ಇಡಲಾಗಿದೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಂಡು, ಉತ್ತಮ ಪ್ರಜೆಯಾಗಲಿ ಎಂಬ ಉದ್ದೇಶದಿಂದ ಹೆಸರುಗಳನ್ನು ನಾಮಕರಣ ಮಾಡಲಾಗಿದೆ’ ಎಂದು ಹೇಳಿದರು.
‘ಸಂಶೋಧನೆ ಮೂಲಕ ರಾಷ್ಟ್ರಕ್ಕೆ ಉಪಯುಕ್ತ ಕೊಡುಗೆ ನೀಡಿದ ಚಿದಾನಂದಮೂರ್ತಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು. ಹೀಗಾಗಿ, ಸಭಾಂಗಣಕ್ಕೆ ಅವರ ಹೆಸರನ್ನು ಇಡಲಾಗಿದೆ’ ಎಂದರು.
ಆಸ್ಪತ್ರೆಗೆ ಪುನೀತ್ ಹೆಸರು: ‘2 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಪ್ರಥಮ ದರ್ಜೆ ಕಾಲೇಜು, 1 ಕಿ.ಮೀ. ಉದ್ದದ ಮೇಲ್ಸೆತುವೆ, ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವನ್ನು ಇದೇ 29ರಂದು ಲೋಕಾರ್ಪಣೆ ಮಾಡಲಾಗು ವುದು. ದಾಸರಹಳ್ಳಿ ವಾರ್ಡ್ನಲ್ಲಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಂದಿನ ತಿಂಗಳು 16ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ನಾಯಂಡಹಳ್ಳಿಯಲ್ಲಿ ನಿರ್ಮಾಣ ವಾಗುತ್ತಿರುವ 200 ಹಾಸಿಗೆಯ ಆಸ್ಪತ್ರೆಗೆ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲಾಗುವುದು’ ಎಂದು ವಿ. ಸೋಮಣ್ಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.