ಬೆಂಗಳೂರು: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೇವೆಯನ್ನು ಕಾಯ್ದಿರಿಸಲು ಪ್ರತ್ಯೇಕ ಆ್ಯಪ್ ತಯಾರಿಸಲಾಗುತ್ತಿದ್ದು, ಆರಂಭಿಕವಾಗಿ ಬನಶಂಕರಿಯಲ್ಲಿರುವ ಬನಶಂಕರಿ ಅಮ್ಮನವರ ದೇವಾಲಯಕ್ಕೆ ಸಂಬಂಧಿಸಿದ ಆ್ಯಪ್ ಶುಕ್ರವಾರ ಬಿಡುಗಡೆಗೊಂಡಿತು.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಆ್ಯಪ್ಗೆ ಚಾಲನೆ ನೀಡಿ ಮಾತನಾಡಿ, ‘ಭಕ್ತರ ಅನುಕೂಲಕ್ಕಾಗಿ ರಾಜ್ಯದ ಪ್ರಮುಖ ದೇವಾಲಯಗಳಲ್ಲಿನ ಸೇವೆಗಳನ್ನು ಆನ್ಲೈನ್ ಮೂಲಕ ಹಾಗೂ ಮೊಬೈಲ್ ಮೂಲಕ ಕಾಯ್ದಿರಿಸಲು ಪೋರ್ಟಲ್ ಹಾಗೂ ಮೊಬೈಲ್ ಅಪ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಪ್ರತಿ ದೇವಸ್ಥಾನಕ್ಕೆ ಪ್ರತ್ಯೇಕ ಆ್ಯಪ್ ಇರಲಿದೆ. ಬನಶಂಕರಿ ದೇವಸ್ಥಾನದಲ್ಲಿ ಇದೀಗ ಆರಂಭವಾಗಿದ್ದು, ವಿವಿಧ ದೇವಸ್ಥಾನಗಳಿಗೆ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.
banashankaritemple.com ವೆಬ್ಸೈಟ್ ಅಥವಾ sri banashankari temple ಆ್ಯಪ್ ಮೂಲಕ ಈ ದೇವಸ್ಥಾನದ ಸೇವೆಗಳನ್ನು ಕಾಯ್ದಿರಿಸಬಹುದು. ದೇಣಿಗೆ ನೀಡುವುದಕ್ಕೂ ಆ್ಯಪ್ನಲ್ಲಿ ಅವಕಾಶ ಇದೆ ಎಂದು ವಿವರಿಸಿದರು.
ರಾಜ್ಯದಲ್ಲಿರುವ 34,563 ಅಧಿಸೂಚಿತ ‘ಸಿ’ ವರ್ಗದ ದೇವಾಲಯಗಳ ಅರ್ಚಕರಿಗೆ ತಸ್ತೀಕ್ ಮತ್ತು ಅರ್ಚಕರ ಕುಟುಂಬದವರಿಗೆ ನೀಡಲಾಗುವ ಮರಣ ಪರಿಹಾರ ಹಾಗೂ ಅರ್ಚಕರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ನೇರವಾಗಿ ಖಾತೆಗೆ ಪಾವತಿಸಲು ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.