ಬೆಂಗಳೂರು: ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಸಂತ್ರಸ್ತ ಮಹಿಳೆ ತನ್ನ ಸ್ನೇಹಿತರ ನೆರವಿನಿಂದ ರೈಲಿನ ಚೈನು ಎಳೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸೇಲಂ ಬಳಿ ನಡೆದಿದೆ.
ಕೂಚುವೆಲ್ಲಿ– ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ ಸಂತ್ರಸ್ತ ಮಹಿಳೆ ತಮ್ಮ ಸ್ನೇಹಿತರ ಜೊತೆ ನ. 5ರಂದು ಎರ್ನಾಕುಲಂನಿಂದ ನಗರಕ್ಕೆ ಬರುತ್ತಿದ್ದರು. ಪ್ರಯಾಣದ ವೇಳೆ (ನ. 6ರಂದು ನಸುಕಿನ 4.45ರ ಸುಮಾರಿಗೆ) ಸೇಲಂ ಮತ್ತು ತಿರುಪತ್ತೂರು ರೈಲು ನಿಲ್ದಾಣಗಳ ಮಧ್ಯೆ ವ್ಯಕ್ತಿಯೊಬ್ಬ ಲೈಂಗಿಕವಾಗಿ ಕಿರುಕುಳ ನೀಡಲು ಮುಂದಾಗುತ್ತಿದ್ದಂತೆ ಸಂತ್ರಸ್ತೆಗೆ ಎಚ್ಚರವಾಗಿದೆ.
ತಕ್ಷಣ ಆ ವ್ಯಕ್ತಿ, ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಬೋಗಿಯಿಂದ ಮತ್ತೊಂದು ಬೋಗಿಗೆ ತೆರಳಿದ್ದಾನೆ. ಆ ವ್ಯಕ್ತಿಯನ್ನು ಹಿಂಬಾಲಿಸಿದ ಮಹಿಳೆ, ಕಿರುಕುಳ ನೀಡಿದ ಬಗ್ಗೆ ಆತನನ್ನು ಪ್ರಶ್ನಿಸಿದಾಗ ಮುಗ್ಧನಂತೆ ವರ್ತಿಸಿದ್ದ. ಬಳಿಕ ಸಂತ್ರಸ್ತ ಮಹಿಳೆ, ತಾನಿದ್ದ ಬೋಗಿಗೆ ಬಂದು ಜೊತೆಗಿದ್ದವರಿಗೆ ವಿಷಯ ತಿಳಿಸಿದ್ದಾರೆ. ಎಲ್ಲರೂ ಸೇರಿ, ಆ ವ್ಯಕ್ತಿಯನ್ನು ಮತ್ತೆ ಹುಡುಕಿದ್ದಾರೆ. ಆ ವೇಳೆ ಆತ ಮತ್ತೊಂದು ಬೋಗಿಯಲ್ಲಿ ಪತ್ತೆಯಾಗಿದ್ದಾನೆ.
ತಿರುಪತ್ತೂರು ನಿಲ್ದಾಣದಲ್ಲಿ ರೈಲು ನಿಲ್ಲುತ್ತಿದ್ದಂತೆ, ಸಂತ್ರಸ್ತೆ ಮತ್ತು ಜೊತೆಗಿದ್ದವರು ವಿಷಯ ತಿಳಿಸಲು ರೈಲಿನ ಟಿಕೆಟ್ ಪರಿಶೋಧಕ (ಟಿಟಿಇ) ಮತ್ತು ರೈಲ್ವೆ ಪೊಲೀಸರಿಗೆ ಹುಡುಕಿದ್ದಾರೆ. ಯಾರೂ ಬಾರದೇ ಇದ್ದಾಗ ಸಂತ್ರಸ್ತೆಯ ಸ್ನೇಹಿತೆಯೊಬ್ಬಳು ತುರ್ತು ನಿಲುಗಡೆಗಾಗಿ ರೈಲಿನ ಚೈನು ಎಳೆದಿದ್ದಾರೆ. ತಕ್ಷಣ ಪೊಲೀಸರು ಅಲ್ಲಿಗೆ ಬಂದಿದ್ದಾರೆ.
ಆರೋಪಿ ಸುನೀಶ್ನನ್ನು ವಶಕ್ಕೆ ಪಡೆದ ಪೊಲೀಸರು, ಪ್ರಯಾಣ ಮುಂದುವರಿಸುವಂತೆ ಮತ್ತು ಬೆಂಗಳೂರಿನಲ್ಲಿ ದೂರು ನೀಡುವಂತೆ ಸಂತ್ರಸ್ತೆಗೆ ಸೂಚಿಸಿದ್ದಾರೆ. ಹೀಗಾಗಿ, ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾರೆ.
‘ಸಂತ್ರಸ್ತೆ ನೀಡಿರುವ ದೂರು ಜೋಲಾರಪೇಟೆ ರೈಲ್ವೆ ಸ್ಟೇಷನ್ಗೆ ವರ್ಗಾವಣೆ ಆಗಲಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.