ಬೆಂಗಳೂರು: ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಚಾಕು ಇರಿತದಿಂದ ಜವಾದ್ ಖಾನ್ (25) ಎಂಬುವರು ಮೃತಪಟ್ಟಿದ್ದು, ಈ ಸಂಬಂಧ ದಂಪತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
‘ಸ್ಥಳೀಯ ನಿವಾಸಿ ಜವಾದ್ ಖಾನ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಮೈ ಮೇಲಿನ ಗಾಯದ ಗುರುತು ಆಧರಿಸಿ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಎನ್ನಲಾದ ಜಿಹಾನ್ ಹಾಗೂ ಇವರ ಪತ್ನಿ ಸಿಮ್ರಾನ್ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮನೆಗೆ ನುಗ್ಗಿದ್ದ ಜವಾದ್: ‘ಹವಾನಿಯಂತ್ರಕದ (ಎ.ಸಿ) ಮೆಕ್ಯಾನಿಕ್ ಆಗಿದ್ದ ಜವಾದ್, ವಿವಾಹಿತೆ ಸಿಮ್ರಾನ್ ಅವರ ಹಿಂದೆ ಬಿದ್ದಿದ್ದರು. ತಮ್ಮೊಂದಿಗೆ ಅಕ್ರಮ ಸಂಬಂಧವಿಟ್ಟುಕೊಳ್ಳುವಂತೆ ಒತ್ತಾಯಿಸಿ ಕಿರುಕುಳ ನೀಡಲಾರಂಭಿಸಿದ್ದರೆಂದು ಗೊತ್ತಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಜವಾದ್ ಚಾಕು ಸಮೇತ ಸಿಮ್ರಾನ್ ಮನೆಗೆ ನುಗ್ಗಿದ್ದರೆಂಬುದಕ್ಕೆ ಪುರಾವೆಗಳು ಸಿಕ್ಕಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸಿಮ್ರಾನ್ ಜೊತೆ ಪತಿ ಜಿಹಾನ್ ಸಹ ಮನೆಯಲ್ಲಿದ್ದರು. ಜವಾದ್ ವರ್ತನೆಯನ್ನು ಪ್ರಶ್ನಿಸಿ ದಂಪತಿ ಮನೆಯಿಂದ ಹೋಗುವಂತೆ ಎಚ್ಚರಿಸಿದ್ದರು. ಅದಕ್ಕೆ ಒಪ್ಪದ ಜವಾದ್, ದಂಪತಿ ಜೊತೆ ಜಗಳ ತೆಗೆದಿದ್ದರು. ತಳ್ಳಾಟ–ನೂಕಾಟ ನಡೆದಿತ್ತು. ಇದೇ ವೇಳೆಯೇ ಜವಾದ್ ಕುತ್ತಿಗೆಗೆ ಚಾಕು ಚುಚ್ಚಿದ್ದರಿಂದ ರಕ್ತ ಸೋರಲಾರಂಭಿಸಿತ್ತು.’
‘ಪ್ರಾಣ ಹೋಗುವ ಭಯದಲ್ಲಿ ಜವಾದ್ ಮನೆಯಿಂದ ಹೊರಗೆ ಬಂದು ಆಸ್ಪತ್ರೆಯತ್ತ ಓಡಿದ್ದರು. ಆಸ್ಪತ್ರೆ ಬಾಗಿಲು ಬಳಿಯೇ ಕುಸಿದು ಬಿದ್ದು, ಮೃತಪಟ್ಟಿದ್ದರು. ಈತನ ಸಾವಿನ ಬಗ್ಗೆ ವೈದ್ಯರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಹೇಳಿವೆ.
‘ದಂಪತಿಯೇ ಜವಾದ್ ಅವರಿಗೆ ಚಾಕುವಿನಿಂದ ಇರಿದರೋ ಅಥವಾ ಜವಾದ್ ಅವರೇ ಇರಿದುಕೊಂಡರೋ ಎಂಬ ಬಗ್ಗೆ ಗೊಂದಲಗಳಿವೆ. ದಂಪತಿ ವಿಚಾರಣೆಯಿಂದಲೇ ನಿಜಾಂಶ ತಿಳಿಯಬೇಕಿದೆ’ ಎಂದೂ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.