ಬೆಂಗಳೂರು: ‘ಮುಖ್ಯಮಂತ್ರಿಯಾಗಿದ್ದಾಗ ರೋಗಗ್ರಸ್ತ ಕಾಗೆಯೊಂದು ನನ್ನ ಕಾರಿನ ಮೇಲೆ ಕುಳಿತುಕೊಂಡಿದ್ದನ್ನು ಮುಂದಿಟ್ಟುಕೊಂಡು ಟಿ.ವಿ. ಮಾಧ್ಯಮಗಳಲ್ಲಿ ನನ್ನ ಅಧಿಕಾರವಧಿ ಬಗ್ಗೆ ಸುಧೀರ್ಘ ಚರ್ಚೆಗಳು ನಡೆದವು. ಜ್ಯೋತಿಷಿಗಳು ಇದಕ್ಕೆ ಬೇರೆ ಬೇರೆ ಬಣ್ಣ ನೀಡಿದರು. ಆದರೂ, ನಾನು ಐದು ವರ್ಷಗಳ ಅಧಿಕಾರ ಪೂರೈಸಿದೆ’ ಎಂದುಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಡಾ. ನಾಗರಾಜ ಜಮಖಂಡಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಡಾ. ನಾಗರಾಜ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ‘ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳಿಗೆ ತನ್ನದೇ ಆದ ಮಹತ್ವದ ಜತೆಗೆ ಜವಾಬ್ದಾರಿಗಳಿವೆ. ಸುದ್ದಿ ಮಾಧ್ಯಮಗಳು ವರದಿ ಮಾಡುವಾಗ ಎಚ್ಚರ ವಹಿಸಬೇಕು. ನಿಷ್ಪಕ್ಷಪಾತವಾದ ಹಾಗೂ ಸಮಾಜಕ್ಕೆ ಉಪಯೋಗವಾಗುವಂತಹ ವರದಿಗಳನ್ನು ಪ್ರಕಟಿಸಬೇಕು’ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಹಿರಿಯ ಪತ್ರಕರ್ತ ರಾಮ ಮನಗೂಳಿ ಹಾಗೂ ರಂಗನಾಥ್ ಭಾರದ್ವಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹50 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ.
*
ನಾಗರಾಜ ಜಮಖಂಡಿ ಅವರು ಪ್ರಾದೇಶಿಕ ಅಸಮಾತನೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಹೋರಾಟದಲ್ಲಿ ಭಾಗವಹಿಸಿದ್ದರು. ಉತ್ತರ ಕರ್ನಾಟಕದ ಧ್ವನಿಯಾಗಿದ್ದರು.
–ರಾಮ ಮನಗೂಳಿ, ಹಿರಿಯ ಪತ್ರಕರ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.