ಬೆಂಗಳೂರು: ‘ನಾಡಿನ ಕೆಲಬುದ್ಧಿಜೀವಿಗಳು ರಫೇಲ್ ಹಗರಣ, ನೋಟು ರದ್ಧತಿ,ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಂತಹ (ಆರ್ಸಿಪಿಇ) ಬಹುದೊಡ್ಡ ಸಮಸ್ಯೆಗಳ ವಿಷಯಗಳ ಬಗ್ಗೆ ದನಿ ಎತ್ತಲಿಲ್ಲ. ಆದರೆ, ಅಕಾಡೆಮಿಗಗಳ ಅಧ್ಯಕ್ಷಗಿರಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸಲು ಮುಂದಿರುತ್ತಾರೆ’ ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಟೀಕಿಸಿದರು.
ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಶನಿವಾರ ಆಯೋಜಿಸಿದ್ದ ‘ಎಸ್.ಆರ್.ಹಿರೇಮಠ 75- ಹೀಗೊಂದು ಕೃತಜ್ಞತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮಲ್ಲಿರುವ ಅನೇಕ ಬುದ್ಧಿಜೀವಿಗಳ ನಡುವೆ ಎಸ್.ಆರ್.ಹಿರೇಮಠ ಭಿನ್ನವಾಗಿ ನಿಲ್ಲುತ್ತಾರೆ. ಹಿರೇಮಠ, ದೇವನೂರ ಮಹಾದೇವ, ಎಚ್.ಎಸ್.ದೊರೆಸ್ವಾಮಿ ನಿಜವಾದ ಬುದ್ಧಿಜೀವಿಗಳು. ಇತರರು ಸಿದ್ದರಾಮಯ್ಯ ಸರ್ಕಾರ ಇದ್ದಾಗ ಏನು ಮಾಡುತ್ತಾರೆ, ಹೋದಾಗ ಏನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ’ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ‘ಹಿರೇಮಠರ ಜೀವನ ನಮ್ಮ ನಾಡಿನ ಚಳವಳಿಗೆ ಸಾಕ್ಷಿ ಪ್ರಜ್ಞೆ. ಭ್ರಷ್ಟಾಚಾರ ವಿರೋಧಿ ಹೋರಾಟ, ರೈತರ ಪರವಾದ ಚಳವಳಿ ಸೇರಿದಂತೆ ಅನೇಕ ಚಳವಳಿಗಳಲ್ಲಿ ಸಕ್ರಿಯರಾಗಿದ್ದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.