ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಅಮೃತಹಳ್ಳಿಯ ಶ್ರೀರಾಮ ದೇವಾಲಯದಲ್ಲಿ ರಾಮನವಮಿಯ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬೆಳಗ್ಗೆಯಿಂದಲೇ ಶ್ರೀರಾಮದೇವರಿಗೆ ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಭಕ್ತರಿಂದ ವಿಷ್ಣುಸಹಸ್ರನಾಮ ಪಾರಾಯಣ, ಶ್ರೀರಾಮ ಭಜನಾ ಮಂಡಳಿಯವರಿಂದ ಭಜನೆ, ಆರ್ಟ್ ಆಫ್ ಲೀವಿಂಗ್ನ ಗುರು ಕಿರಣ್ ರೆಡ್ಡಿ ಮಧು ಮತ್ತು ತಂಡದವರಿಂದ ಸತ್ಸಂಗ ಮತ್ತು ಭಜನೆ ನಡೆಯಿತು.
ಉಭಯ ಮಾರಮ್ಮ ಭಜನಾಮಂಡಳಿ ಮತ್ತು ಸೀತಾರಾಮ ಭಜನಾ ಮಂಡಳಿಯವರಿಂದ ಭಜನೆ, ಶ್ರೀರಾಮ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ ಹಾಗೂ ವಾಗ್ದೇವಿ ಸ್ಕೂಲ್ ಆಫ್ ಮ್ಯೂಸಿಕ್ನ ವಿದೂಷಿ ಸೀತಾಲಕ್ಷ್ಮೀ ವೆಂಕಟೇಶ್ ಮತ್ತು ಶಿಷ್ಯರಿಂದ ದೇವರನಾಮಗಳ ಗಾಯನ ಏರ್ಪಡಿಸಲಾಗಿತ್ತು.
ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಸಂಜೆ ‘ಸೀತಾರಾಮರ ಕಲ್ಯಾಣೋತ್ಸವ‘ ನೆರವೇರಿತು. ದೇವಾಲಯದ ಆವರಣದಲ್ಲಿ ಕೋಸಂಬರಿ, ಮಜ್ಜಿಗೆ, ಪಾನಕ ವಿತರಣೆಯ ಜೊತೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಶ್ರೀರಾಮಸೇವಾ ಪ್ರತಿಷ್ಠಾನ ಟ್ರಸ್ಟ್ನ ಸಂಸ್ಥಾಪನಾ ಅಧ್ಯಕ್ಷ ಎಂ.ಕೋದಂಡರಾಮ, 17ನೇ ವರ್ಷದ ಶ್ರೀರಾಮನವಮಿಯ ಪ್ರಯುಕ್ತ ಸೀತಾರಾಮರ ಕಲ್ಯಾಣೋತ್ಸವ, ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸೋಮವಾರ ಸಂಜೆ ಅಮೃತಹಳ್ಳಿಯ ಪ್ರಮುಖ ಬೀದಿಗಳಲ್ಲಿ ಸೀತಾರಾಮರ ರಥೋತ್ಸವ ಹಾಗೂ ಏಪ್ರಿಲ್ 8ರಿಂದ 15 ರವರೆಗೆ ಪ್ರತಿದಿನ ಸಂಜೆ 6.45ಕ್ಕೆ ಸಂಗೀತ ವಿದ್ವಾಂಸರಿಂದ ವಿವಿಧ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.