ಸಿ.ಟಿ. ರವಿ
ಬೆಂಗಳೂರು: ಪ್ರಸ್ತಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆದ್ದಿದ್ದಕ್ಕೆ ಬೆಂಗಳೂರಿನಲ್ಲಿ ನಿನ್ನೆ ನಡೆದ ಸಂಭ್ರಮಾಚರಣೆ ವೇಳೆಯ ಕಾಲ್ತುಳಿತದ ಪ್ರಕರಣ ಒಂದು ಆಕಸ್ಮಿಕ ಘಟನೆಯಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಅವರು ಆಪಾದಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಆಕಸ್ಮಿಕ ಸಾವಲ್ಲ. ಕಾರ್ಯಕ್ರಮ ಮಾಡುವ ನಿರ್ಧಾರ ತೆಗೆದುಕೊಂಡ ಆಯೋಜಕರೇ ಈ ಸಾವಿಗೆ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಗೆಲುವಿನ ಸಂಭ್ರಮ ಕ್ರೀಡಾಭಿಮಾನಿಗಳಿಗೆ ಇರುವುದು ಸ್ವಾಭಾವಿಕ. ಆ ಸಂಭ್ರಮದಲ್ಲಿ ರಾಜಕೀಯ ತೆವಲು ತೀರಿಸಿಕೊಳ್ಳಲು ಹೊರಟ ಇವರು, ಪೋಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಅನುಮತಿಯನ್ನೂ ಪಡೆಯದೆ ಎರಡೆರಡು ಕಡೆ ಸಂಭ್ರಮಾಚರಣೆ. ತಮ್ಮನ್ನೇ ತಾವು ವೈಭವೀಕರಣ ಮಾಡಲು ಹೋಗಿ ಅಮಾಯಕರನ್ನು ಬಲಿ ತೆಗೆದುಕೊಂಡಿದ್ದೀರಿ ಎಂದು ಹರಿಯಾಯ್ದಿದ್ದಾರೆ.
ಕ್ರೀಡಾಭಿಮಾನಿಗಳ ಸಾವಿಗೆ ಹೊಣೆ ಯಾರು? ಕೊಲೆಗಾರರು ನೀವೇ.. ಗೆಲುವಿನ ಸಂಭ್ರಮವನ್ನು ಸಾವಿನ ಸೂತಕವಾಗಿ ಪರಿವರ್ತಿಸಿದವರೂ ನೀವೆ.. ಎಂದು ಸಿ.ಟಿ. ರವಿ ಕಿಡಿಕಾರಿದ್ದಾರೆ.
ಹದಿನೆಂಟು ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವಕ್ಕೆ ಬುಧವಾರ ಸಾಗರೋಪಾದಿ ಯಲ್ಲಿ ಜನ ಹರಿದುಬಂದಿದ್ದರು. ಆ ವೇಳೆ ಉಂಟಾದ ಕಾಲ್ತುಳಿತದಿಂದ 11 ಮಂದಿ ದುರಂತ ಸಾವು ಕಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.