ಬೆಂಗಳೂರು: ರಸ್ತೆ ಮಧ್ಯದಲ್ಲಿ ನಿಂತು ಜನ್ಮದಿನ ಆಚರಿಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದ ಆರೋಪದ ಅಡಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ, ವಿದ್ಯಾರಣ್ಯಪುರದ ನಿವಾಸಿ ಭಕ್ತವತ್ಸ(47) ಎಂಬುವವರನ್ನು ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ, ತನ್ನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜತೆ ಸೇರಿಕೊಂಡು ಜೂನ್ 12ರಂದು ವಿದ್ಯಾರಣ್ಯಪುರದ ನರಸೀಪುರ ಮುಖ್ಯರಸ್ತೆಯಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಜನ್ಮದಿನ ಆಚರಿಸಿಕೊಂಡಿದ್ದ. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
‘ಜನ್ಮದಿನಾಚರಣೆಗೆಂದು ಬ್ಯಾನರ್ ಕಟ್ಟಲಾಗಿತ್ತು. ಪಟಾಕಿ ಸಿಡಿಸಲಾಗಿತ್ತು. ಅಲ್ಲದೆ, ಭಕ್ತವತ್ಸಲನನ್ನು ಮೆಚ್ಚಿಸಲು ಕೆಲವು ಬೆಂಬಲಿಗರು, ತಮ್ಮ ಬೈಕ್ಗಳನ್ನು ಸ್ಟಾರ್ಟ್ ಮಾಡಿ, ಮಾರ್ಪಡಿಸಿದ ಸೈಲೆನ್ಸರ್ಗಳ ಮೂಲಕ ಜೋರು ಶಬ್ದ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.
ಜನ್ಮದಿನ ಆಚರಣೆಯನ್ನು ಆರೋಪಿಯ ಪತ್ನಿ ಲಲಿತಾ ಹಾಗೂ ಬೆಂಬಲಿಗರು ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊಗಳನ್ನು ಗಮನಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.