ಬೆಂಗಳೂರು: ಕೆಲವು ದುಷ್ಕರ್ಮಿಗಳು ಬೀದಿನಾಯಿಗಳನ್ನು ಮತ್ತು ಸಾಕುನಾಯಿಗಳನ್ನು ಸಾಯಿಸುತ್ತಿದ್ದಾರೆ ಎಂದು ಚಿಕ್ಕಬೆಳ್ಳಂದೂರು ನಿವಾಸಿಗಳು ಆರೋಪಿಸಿದ್ದಾರೆ.
ಬಡಾವಣೆಯ ಸುತ್ತ–ಮುತ್ತ ಪ್ರಾಣಿಗಳ ಮೂಳೆಗಳು ಮತ್ತು ದೇಹದ ಇನ್ನಿತರೆ ಅಂಗಾಂಗಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಕ್ಯೂಪಾದಂತಹ ಪ್ರಾಣಿ ದಯಾ ಸಂಘಗಳ ಗಮನಕ್ಕೂ ತಂದಿದ್ದಾರೆ. ಕ್ಯಾಪಾದ ಸದಸ್ಯ ತೇಜೇಶ್ವರ್ ಅವರು ವರ್ತೂರು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳ ಮೂಳೆಗಳು ಬಿದ್ದಿರುವುದನ್ನು ತೋರಿಸಿದ್ದಾರೆ.
‘ಈ ನಾಯಿಗಳನ್ನು ಯಾರು ಸಾಯಿಸಿದ್ದಾರೆ ಎಂಬ ಶಂಕೆ ನಮಗಿದೆಯೋ ಅವರ ಮನೆಯಿಂದ ಕೇವಲ ಐದು ಅಡಿ ದೂರದಲ್ಲಿ ನಾಯಿಗಳ ತಲೆ ಬುರುಡೆ, ಮೂಳೆಗಳು ಬಿದ್ದಿವೆ. ನಾಯಿಗಳನ್ನು ಸಾಯಿಸಿ, ಸುಡಲಾಗಿದೆ. ಆದರೆ, ಬುರುಡೆಗಳು ಸಿಕ್ಕಿವೆ’ ಎಂದು ತೇಜೇಶ್ವರ್ ಹೇಳಿದ್ದು, ಈ ಕುರಿತು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
‘ನಾಯಿಗಳ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಮನೆಯಲ್ಲಿ ಏರ್ಗನ್ ಪತ್ತೆಯಾಗಿದೆ. ಇದಕ್ಕೆ ಪರವಾನಗಿ ಅಗತ್ಯವಿಲ್ಲ. ನಾಯಿಗಳ ಮೂಳೆಗಳ ಜೊತೆಯಲ್ಲಿ, ಹಂದಿಗಳ ಮೂಳೆಗಳೂ ಪತ್ತೆಯಾಗಿವೆ’ ಎಂದು ವರ್ತೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
‘ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಐವರು ಸೇರಿ ಈ ರೀತಿ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ. ಈ ಪ್ರಾಣಿಗಳ ಮಾಂಸದಿಂದಲೇ ಆಹಾರ ತಯಾರಿಸುತ್ತಿರುವ ಶಂಕೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.