ADVERTISEMENT

ಉಪನಗರ ರೈಲು: ಕಾಮಗಾರಿಗೆ ತಯಾರಿ

ಅನುಮೋದನೆ ದೊರೆತು ಎರಡು ವರ್ಷಗಳ ಬಳಿಕ ಬ್ಯಾರಿಕೇಡ್ ಅಳವಡಿಕೆ

ವಿಜಯಕುಮಾರ್ ಎಸ್.ಕೆ.
Published 15 ಅಕ್ಟೋಬರ್ 2022, 19:28 IST
Last Updated 15 ಅಕ್ಟೋಬರ್ 2022, 19:28 IST
ಉಪನಗರ ರೈಲು ಯೋಜನೆ ಕಾಮಗಾರಿಗೆ ಬ್ಯಾರಿಕೇಡ್‌ ಅಳವಡಿಸಿರುವುದು     –ಪ್ರಜಾವಾಣಿ ಚಿತ್ರ/ರಂಜು ಪಿ.
ಉಪನಗರ ರೈಲು ಯೋಜನೆ ಕಾಮಗಾರಿಗೆ ಬ್ಯಾರಿಕೇಡ್‌ ಅಳವಡಿಸಿರುವುದು     –ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ಅನುಮೋದನೆ ದೊರೆತು ಎರಡು ವರ್ಷಗಳ ಬಳಿಕ ಕೊನೆಗೂ ಉಪನಗರ ರೈಲು ಯೋಜನೆ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ. ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ನಡುವಿನ ‘ಸಂಪಿಗೆ’ ಕಾರಿಡಾರ್ ಸಿವಿಲ್ ಕಾಮಗಾರಿ ಆರಂಭಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ( ಕೆ–ರೈಡ್) ಸಿದ್ಧತೆ ಆರಂಭಿಸಿದೆ.

ಎಲ್‌ ಆ್ಯಂಡ್ ಟಿ ಕಂಪನಿ ಗುತ್ತಿಗೆ ಪಡೆದುಕೊಂಡಿದ್ದು, ಹೆಬ್ಬಾಳ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಾಮಗಾರಿ ಆರಂಭಿಸಲು ಕಳೆದೊಂದು ವಾರದಿಂದ ತಯಾರಿ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ಆರಂಭವಾಗಲಿದೆ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

‘ಎಂಜಿನಿಯರ್‌ಗಳು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಲೈನ್ಮೆಂಟ್‌, ಡಯಾಗನಲ್ ಕೆಲಸಗಳು ನಡೆಯುತ್ತಿವೆ. ನಿತ್ಯವೂ ಮಳೆ ಸುರಿಯುತ್ತಿರುವುದರಿಂದ ಸಿವಿಲ್ ಕಾಮಗಾರಿ ಆರಂಭವಾಗಲು ಇನ್ನೂ ಕೆಲವು ದಿನಗಳು ಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಪ್ರಧಾನ ಮಂತ್ರಿಯವರು 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಸಂಪಿಗೆ ಮತ್ತು ಕನಕ (ರಾಜಾನುಕುಂಟೆ–ಹೀಲಳಿಗೆ) ಕಾರಿಡಾರ್‌ ಕಾಮಗಾರಿ ಆರಂಭವಾಗಲಿದೆ. ಪ್ರಧಾನಿ ಅವರು ನೀಡಿರುವ ಅವಧಿದೊಳಗೆ ಎಲ್ಲಾ ಕಾಮಗಾರಿಯನ್ನೂ ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಕೆ–ರೈಡ್ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಚಿಕ್ಕಬಾಣಾವರ–ಬೈಯಪ್ಪನಹಳ್ಳಿ ನಡುವೆ 25 ಕಿ.ಮೀ. ಮಾರ್ಗದಲ್ಲಿ 9.72 ಕಿ. ಮೀ. ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ. 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸಮಯ ನಿಗದಿ ಮಾಡಲಾಗಿದೆ. ಈ ಮಾರ್ಗದಲ್ಲಿ 14 ನಿಲ್ದಾಣಗಳು ನಿರ್ಮಾಣವಾಗಲಿದ್ದು, ಈ ಕಾಮಗಾರಿಗೆ ಪ್ರತ್ಯೇಕ ಟೆಂಡರ್ ಕರೆಯಲಾಗುವುದು ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.