ಬೆಂಗಳೂರು: ‘ನಮ್ಮ ಸಾವಿಗೆ ನಾವೇ ಕಾರಣ’ ಎಂದು ಮರಣಪತ್ರ ಬರೆದಿಟ್ಟು ತಾಯಿ- ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ರಸ್ತೆಯ ಬಾಪೂಜಿನಗರದ ಕವಿಕಾ ಲೇಔಟ್ನಲ್ಲಿ ನಡೆದಿದೆ.
ಶಶಿಕಲಾ (43) ಮತ್ತು ಅವರ ಮಗ ಹೇಮಾದ್ರಿ (11) ಮೃತರು. ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮಂಗಳವಾರ (ಮಾ. 3) ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಮನೆಯಿಂದ ಹೊರಹೋಗಿದ್ದ ಶಶಿಕಲಾ ಅವರ ಪತಿ, ಮರಳಿ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಬ್ಯಾಟರಾಯನಪುರ ಠಾಣೆಯ ಪೊಲೀಸರು ತಿಳಿಸಿದರು.
ಲಾರಿ ಚಾಲಕ ಶೆಟ್ಟಿ ಎಂಬುವರ ಜತೆ 20 ವರ್ಷಗಳ ಹಿಂದೆ ಶಶಿಕಲಾ ಅವರ ವಿವಾಹ ಆಗಿತ್ತು. ದಂಪತಿಗೆ ಒಬ್ಬನೇ ಮಗ ಇದ್ದ. ತಾಯಿ-ಮಗ ಅನಾರೋಗ್ಯದಿಂದ ಬಳಲುತ್ತಿದ್ದರು. ಮಗನಿಗೆ ಮೂರ್ಛೆ ಹೋಗುವ ಕಾಯಿಲೆ ಇತ್ತು. ಚಿಕಿತ್ಸೆ ಕೊಡಿಸಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ. ಅದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಪತಿ ಹೇಳಿಕೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.