ADVERTISEMENT

ಕಟ್ಟಡ ಏರಿ ಭೀತಿ ಸೃಷ್ಟಿಸಿದ ಮಾನಸಿಕ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:18 IST
Last Updated 12 ಏಪ್ರಿಲ್ 2019, 20:18 IST

ಬೆಂಗಳೂರು: ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಐದು ಅಂತಸ್ತಿನ ಕಟ್ಟಡ ಏರಿದ್ದ ಮಾನಸಿಕ ಅಸ್ವಸ್ಥನೊಬ್ಬ, ‘ಯಾರಾದರೂ ಹತ್ತಿರ ಬಂದರೆ ಹಾರಿಬಿಡುತ್ತೇನೆ’ ಎಂದು ಬೆದರಿಸುತ್ತ ಸುಮಾರು ಎರಡೂವರೆ ತಾಸು ಆತಂಕ ಸೃಷ್ಟಿಸಿದ್ದ.

8.30ರ ಸುಮಾರಿಗೆ ಕಟ್ಟಡದ ಮೇಲೆ ಈತನನ್ನು ಕಂಡ ಸ್ಥಳೀಯರು, ಕೂಡಲೇ ಪೊಲೀಸ್ ಹಾಗೂ ಅಗ್ನಿಶಾಮಕ ನಿಯಂತ್ರಣ ಕೊಠಡಿಗಳಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, 11 ಗಂಟೆವರೆಗೂ ಆತನ ಮನವೊಲಿಸಿ, ಕೊನೆಗೂ ಸುರಕ್ಷಿತವಾಗಿ ಕೆಳಗೆ ಕರೆದುಕೊಂಡು ಬಂದರು.

‘ಆ ಯುವಕನ ಹೆಸರು ಪರ್ವೇಜ್ (25). ಕಾಡುಗೊಂಡನಹಳ್ಳಿ ಸಮೀಪದ ಪಿಳ್ಳಣ್ಣ ಗಾರ್ಡನ್‌ನ ನಿವಾಸಿ. ಖಾಕಿ ಬಟ್ಟೆ ತೊಟ್ಟಿದ್ದ ಯಾರನ್ನೇ ನೋಡಿದರೂ ಚೀರಿಕೊಳ್ಳುತ್ತಿದ್ದ. ಕೆಳಗೆ ಹಾರುವುದಾಗಿ ಬೆದರಿಸುತ್ತಿದ್ದ. ಬಳಿಕ ಸಿಬ್ಬಂದಿ ಮಫ್ತಿಯಲ್ಲಿ ಮಹಡಿಗೆ ಹೋಗಿ ಆತನನ್ನು ಕರೆತಂದರು. ಸದ್ಯ ಶ್ರೀನಿವಾಸ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ’ ಎಂದು ಕಾಟನ್‌ಪೇಟೆ ಪೊಲೀಸರು ಹೇಳಿದರು.

ADVERTISEMENT

‘ನಾಲ್ಕು ವರ್ಷಗಳ ಹಿಂದೆ ಪತಿ ತೀರಿಕೊಂಡರು. ಆ ನಂತರ ಮಗ ಖಿನ್ನತೆಗೆ ಒಳಗಾದ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖನಾಗಲಿಲ್ಲ. ಹೀಗಾಗಿ, ಮನೆಯಲ್ಲೇ ಕೂಡಿ ಹಾಕಿ ಊಟ–ತಿಂಡಿ ಕೊಡುತ್ತಿದ್ದೆವು. ‌ಬೆಳಿಗ್ಗೆ 6 ಗಂಟೆಗೆ ನಾವು ನಿದ್ರೆಯಲ್ಲಿದ್ದಾಗ ಮನೆಯಿಂದ ಹೊರಗೆ ಬಂದಿದ್ದಾನೆ’ ಎಂದು ತಬ್ರೇಜ್‌ನ ತಾಯಿ ಜಬೀನಾ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.