ಬೆಂಗಳೂರು: ಬೇಕರಿ, ಕಾಂಡಿಮೆಂಟ್ಸ್ ಸೇರಿದಂತೆ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ನೋಟಿಸ್ಗಳನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಜುಲೈ 24ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟ ತಿಳಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಒಕ್ಕೂಟದ ಅಧ್ಯಕ್ಷ ಕರುಣಾಕರ ಶೆಟ್ಟಿ ಹಟ್ಟಿಯಂಗಡಿ, ‘ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾಂಡಿಮೆಂಟ್ಸ್, ಬೇಕರಿ, ಹಾಲು, ತರಕಾರಿ ಅಂಗಡಿ ಸೇರಿದಂತೆ ಸಣ್ಣ ಉದ್ದಿಮೆದಾರರಿಗೆ ಜಿಎಸ್ಟಿ ನೋಟಿಸ್ ನೀಡಿ, ಒಂದು ವಾರದಲ್ಲಿ ಉತ್ತರಿಸುವಂತೆ ತಿಳಿಸಿದೆ. ಇದರಿಂದ ನಮ್ಮಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ನಾಲ್ಕು ವರ್ಷದ ಬ್ಯಾಂಕ್ ವಹಿವಾಟು, ಖರೀದಿ ರಸೀದಿ, ವ್ಯಾಪಾರ–ವಹಿವಾಟಿನ ಮಾಹಿತಿ ನೀಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಆದರೆ ನಮ್ಮ ಬಳಿ ಯಾವುದೇ ರೀತಿಯ ದಾಖಲೆಗಳಿಲ್ಲ’ ಎಂದು ಮಾಹಿತಿ ನೀಡಿದರು.
‘ಒಂದು ವಾರದಲ್ಲಿ ಮಾಹಿತಿ ಸಲ್ಲಿಸಿ ಎಂದರೆ ಹೇಗೆ? ನಮ್ಮವರು ವ್ಯಾಪಾರದ ಪುಸ್ತಕ ನಿರ್ವಹಣೆ ಮಾಡಿಲ್ಲ. ಇಲ್ಲಿ ಮಾಲೀಕರೇ ಕೆಲಸಗಾರರು. ನಾಳಿನ ವ್ಯಾಪಾರಕ್ಕೆ ಯಾವ ವಸ್ತುಗಳನ್ನು ತರಬೇಕು ಎಂಬುದನ್ನು ಯೋಚಿಸುತ್ತಾರೆಯೇ ಹೊರತು, ಲೆಕ್ಕ ಬರೆಯಲು ಯಾರಿಗೂ ಸಮಯವಿಲ್ಲ’ ಎಂದರು.
‘ನಮ್ಮ ಅಂಗಡಿಗಳಿಗೆ ಬರುವ ಶೇಕಡ 95ರಷ್ಟು ಜನ ಡಿಜಿಟಲ್ ಪಾವತಿ ಮಾಡುತ್ತಾರೆ. ವಾರ್ಷಿಕ 40 ಲಕ್ಷ ವಹಿವಾಟು ದಾಟಿರುವ ವ್ಯಾಪಾರಿಗಳಿಂದ ಲಭ್ಯವಿರುವ ದಾಖಲೆಗಳನ್ನು ಪಡೆದುಕೊಂಡು ಶೇ 1ರಷ್ಟು ರಾಜೀ ತೆರಿಗೆ ಪರಿಹಾರ ಯೋಜನೆಯಡಿ ತೆರಿಗೆ ಪಾವತಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.