ADVERTISEMENT

ಅನರ್ಹ ಶಾಸಕರಿಗೆ ಪಾಠ ಕಲಿಸಿ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 20:58 IST
Last Updated 17 ನವೆಂಬರ್ 2019, 20:58 IST
ಎಚ್.ಡಿ.ದೇವೇಗೌಡ ಮಾತನಾಡಿದರು. ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಪ್ರಕಾಶ್‌, ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ, ಎ.ಎಂ.ಹನುಮಂತೇಗೌಡ, ಹನುಮಂತರಾಯಪ್ಪ ಇದ್ದಾರೆ.
ಎಚ್.ಡಿ.ದೇವೇಗೌಡ ಮಾತನಾಡಿದರು. ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಪ್ರಕಾಶ್‌, ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ, ಎ.ಎಂ.ಹನುಮಂತೇಗೌಡ, ಹನುಮಂತರಾಯಪ್ಪ ಇದ್ದಾರೆ.   

ರಾಜರಾಜೇಶ್ವರಿನಗರ (ಬೆಂಗಳೂರು): ‘ಬಿಜೆಪಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗೆಲ್ಲಲು ಪ್ರಯತ್ನಿಸುತ್ತಿದೆ. ಅವರಲ್ಲಿ ಲೂಟಿ ಮಾಡಿದ ಹಣ ಸಾಕಷ್ಟಿದೆ. ನಮ್ಮಲ್ಲಿ ಹಣವಿಲ್ಲದಿದ್ದರೂ ಜೆಡಿಎಸ್ ಗೆಲುವು ಖಚಿತ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಬಸ್ತಿ ಬಳಿ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಪರವಾಗಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದರು.

‘ಎರಡು ಬಾರಿ ಜವರಾಯಿಗೌಡರನ್ನು ಸೋಲಿಸಿದ್ದೀರಿ. ಪಕ್ಷ ಮತ್ತು ಜನರ ಪರವಾಗಿ ಅಭಿವೃದ್ಧಿಗಾಗಿ ಜೆಡಿಎಸ್ ಉಳಿಸಿ’ ಎಂದು ಮನವಿ ಮಾಡಿದರು.

ADVERTISEMENT

‘ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಚೆನ್ನಾಗಿಲ್ಲ. ನಾಯಕರಲ್ಲಿ ಒಗ್ಗಟ್ಟಿಲ್ಲದೆ ಛಿದ್ರವಾಗಿದೆ. ಒತ್ತಡ ತಂದು ತುಮಕೂರಿನಲ್ಲಿ ನನ್ನನ್ನು ನಿಲ್ಲಿಸಿ ಪಿತೂರಿ ನಡೆಸಿ ಸೋಲಿಸಿದರು’ ಎಂದು ದೂರಿದರು.

ಟಿ.ಎನ್.ಜವರಾಯಿಗೌಡ ಮಾತನಾಡಿ, ‘ಎರಡು ಬಾರಿ ಅಲ್ಪ ಮತಗಳಿಂದ ಸೋಲಲು ಕೆಲವು ನ್ಯೂನತೆಗಳು ಕಾರಣ. ಪಕ್ಷದ ಮುಖಂಡ ಎ.ಎಂ.ಹನುಮಂತೇಗೌಡ ಹಾಗೂ ನನ್ನ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್‌ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ನೂರಾರು ಕೋಟಿ ಅನುದಾನ ಕೊಟ್ಟರೂ ಎರಡು ಪಕ್ಷಗಳಿಗೆ ದ್ರೋಹ ಎಸಗಿರುವ ಸೋಮಶೇಖರ್‍ಗೆ ಮತದಾರರು ಬುದ್ಧಿ ಕಲಿಸಬೇಕು’ ಎಂದರು.

ರಾಜರಾಜೇಶ್ವರಿ ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ‘ಎಸ್.ಟಿ.ಸೋಮಶೇಖರ್ ಕಾಂಗ್ರೆಸ್‍ನಲ್ಲಿ ಎಲ್ಲ ಬಗೆಯ ಅಧಿಕಾರ ಪಡೆದಿದ್ದಾರೆ. ಆದರೂ, ಆ ಪಕ್ಷಕ್ಕೆ ಮೋಸ ಮಾಡಿರುವ ಅವರನ್ನು ಈ ಬಾರಿ ಜೆಡಿಎಸ್– ಕಾಂಗ್ರೆಸ್ ಕಾರ್ಯಕರ್ತರು ಸೇರಿ ಮನೆಗೆ ಕಳುಹಿಸುವುದು ಶತಸಿದ್ಧ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.