ಬೆಂಗಳೂರು: ಸ್ನೇಹಿತ ಸಾಲ ಮರಳಿಸದೆ ಸತಾಯಿಸಿದ್ದರಿಂದ ಬೇಸರಗೊಂಡು ಸಾಫ್ಟ್ವೇರ್ ಉದ್ಯೋಗಿ ಸುರೇಶ್ (40) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುರೇಶ್ ಅವರು ಪತ್ನಿ ಶೋಭಾ ಹಾಗೂ ಮಗ ಸಾತ್ವಿಕ್ ಜತೆ ಬಸವೇಶ್ವರ ನಗರ ಸಮೀಪದ ಮಹಾಗಣಪತಿ ನಗರದಲ್ಲಿ ನೆಲೆಸಿದ್ದರು. ಮಂಗಳವಾರ ಬೆಳಿಗ್ಗೆ 5.30ರ ಸುಮಾರಿಗೆ ಪತ್ನಿ ಯೋಗ ತರಗತಿಗೆ ತೆರಳಿದ ನಂತರ ಸುರೇಶ್ ನೇಣಿಗೆ ಶರಣಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶೋಭಾ ಯೋಗ ತರಗತಿಯಿಂದ 7.30ರ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಸಾತ್ವಿಕ್ ಇನ್ನೊಂದು ಕೋಣೆಯಲ್ಲಿ ಮಲಗಿದ್ದ. ಶೋಭಾ ಚೀರಾಟ ಕೇಳಿ ಮನೆಗೆ ಧಾವಿಸಿದ ಸ್ಥಳೀಯರು, ಸುರೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು.
‘ಪತಿಯಿಂದ ₹ 3.71 ಲಕ್ಷ ಸಾಲ ಪಡೆದಿದ್ದ ಅವರ ಸ್ನೇಹಿತ ಶ್ಯಾಮ್, ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ. ಇತ್ತೀಚೆಗೆ ತನ್ನ ಗೆಳೆಯ ಬಸವನಗೌಡ ಸಂಗಾಪುರ ಜತೆ ಸೇರಿಕೊಂಡು ಪತಿಗೆ ಬೆದರಿಕೆಯನ್ನೂ ಹಾಕಿದ್ದ. ಇದರಿಂದ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಶೋಭಾ ಬಸವೇಶ್ವರನಗರ ಠಾಣೆಗೆ ದೂರು ಕೊಟ್ಟಿದ್ದಾರೆ.
ಮೃತರ ಪ್ಯಾಂಟ್ ಜೇಬಿನಲ್ಲಿ ಪತ್ರ ಸಿಕ್ಕಿದ್ದು, ‘ನನ್ನ ಸಾವಿಗೆ ಶ್ಯಾಮ್ ಕಾರಣ’ ಎಂದು ಬರೆಯಲಾಗಿದೆ. ಹೀಗಾಗಿ, ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಶ್ಯಾಮ್ ಹಾಗೂ ಬಸವನಗೌಡ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.