ಬೆಂಗಳೂರು:‘ತಸ್ತೀಕ್ ಹಣವನ್ನು ₹4 ಸಾವಿರದಿಂದ ₹5 ಸಾವಿರಕ್ಕೆ ಹೆಚ್ಚಿಸಬೇಕು. ‘ಎ’ ಹಾಗೂ ‘ಬಿ’ ವರ್ಗದ ದೇಗುಲಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ವೇತನವನ್ನು ದೇಗುಲದ ಆದಾಯದಲ್ಲಿ ಶೇ 45ಕ್ಕೆ ಹೆಚ್ಚಿಸಬೇಕು’ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ–ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮನವಿ ಮಾಡಿದೆ.
ಸದ್ಯ, ದೇಗುಲದ ಆದಾಯದಲ್ಲಿ ಶೇ 35ರಷ್ಟನ್ನು ಸಿಬ್ಬಂದಿಗೆ ವೇತನವಾಗಿ ನೀಡಲಾಗುತ್ತಿದೆ.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿರುವ ಒಕ್ಕೂಟದ ಪದಾಧಿಕಾರಿಗಳು, ‘ಮುಜರಾಯಿ ದೇವಾಲಯಗಳಲ್ಲಿ ವಂಶಪಾರಂಪರ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರ ಸೇವಾ ನಿವೃತ್ತಿಯನ್ನು 65 ವರ್ಷಕ್ಕೆ ನಿಗದಿಪಡಿಸಿರುವುದು ಸರಿಯಲ್ಲ. ಅರ್ಚಕ ಕೆಲಸವನ್ನು ಮಾಡಲು ಶಕ್ತರಾಗಿರುವವರನ್ನು ಮುಂದುವರಿಸಬೇಕು’ ಎಂದು ಕೋರಿದರು.
ಮುಜರಾಯಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿದ್ದು, ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಇಲಾಖೆ ವತಿಯಿಂದ ನಡೆಸುತ್ತಿರುವ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡುವ ಘಟಿಕೋತ್ಸವವು 20 ವರ್ಷಗಳಿಂದ ನಡೆದಿಲ್ಲ. ಈ ಬಗ್ಗೆ ಗಮನ ನೀಡಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.