ADVERTISEMENT

ಭಟ್ಕಳದಲ್ಲಿ ಸ್ಫೋಟಕ ಸಂಗ್ರಹಿಸಿದ್ದ ಶಂಕಿತ ಉಗ್ರ

ಜೈನಲುದ್ದೀನ್‌ನನ್ನು ಕರೆದೊಯ್ಡು ಮಹಜರು ನಡೆಸಿದ ಸಿಸಿಬಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:15 IST
Last Updated 5 ಅಕ್ಟೋಬರ್ 2019, 20:15 IST

ಬೆಂಗಳೂರು: ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಂಧಿಸಿರುವ ಶಂಕಿತ ಉಗ್ರ ಜೈನಲುದ್ದೀನ್‌ನನ್ನು ಭಟ್ಕಳಕ್ಕೆ ಕರೆದೊಯ್ದಿದ್ದ ಸಿಸಿಬಿ ಪೊಲೀಸರು, ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ ನಗರಕ್ಕೆ ವಾಪಸು ಕರೆತಂದಿದ್ದಾರೆ.

ಮುಂಬೈ ಆರ್ಥರ್‌ ರೋಡ್‌ ಜೈಲಿನಲ್ಲಿದ್ದ ಜೈನಲುದ್ದೀನ್‌ನನ್ನು ಬಾಡಿ ವಾರೆಂಟ್‌ ಮೇಲೆ ಸಿಸಿಬಿ ಪೊಲೀಸರು‌ ಇತ್ತೀಚೆಗಷ್ಟೇ ಕಸ್ಟಡಿಗೆ ಪಡೆದಿದ್ದರು. ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ಶಂಕಿತ ಉಗ್ರನ ವಿಚಾರಣೆ ನಡೆಸುತ್ತಿದೆ.

‘ನಗರದಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟಕ್ಕೆ ಜೈನಲುದ್ದೀನ್‌ ಸ್ಫೋಟಕಗಳನ್ನು ಪೂರೈಸಿದ್ದ. ಆ ಸ್ಫೋಟಕಗಳನ್ನು ಆತ ಭಟ್ಕಳದ ಮನೆಯೊಂದರಲ್ಲಿ ಸಂಗ್ರಹಿಸಿದ್ದ. ಆ ಬಗ್ಗೆ ಆತನೇ ಹೇಳಿಕೆ ನೀಡಿದ್ದಾನೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಜೈನಲುದ್ದೀನ್‌ನನ್ನು ಬಿಗಿ ಭದ್ರತೆಯಲ್ಲಿ ಭಟ್ಕಳಕ್ಕೆ ಕರೆದೊಯ್ದಿದ್ದ ಪೊಲೀಸರ ವಿಶೇಷ ತಂಡ, ಆತನ ಸಮ್ಮುಖದಲ್ಲೇ ಮಹಜರು ಪ್ರಕ್ರಿಯೆ ನಡೆಸಿತು. ಆತ ಓಡಾಡಿದ್ದ ಸ್ಥಳಗಳಿಗೂ ಹೋಗಿ ಮಾಹಿತಿ ಪಡೆದಿದೆ’ ಎಂದು ತಿಳಿಸಿದರು.

ಪುಲಿಕೇಶಿನಗರದಲ್ಲೂ ಮಹಜರು: ‘ಸ್ಫೋಟಕ್ಕೆ ಬೇಕಾದ ಸುಧಾರಿತ ಉಪಕರಣಗಳನ್ನು ಪುಲಕೇಶಿನಗರದಲ್ಲಿದ್ದ ಇನ್ನೊಬ್ಬ ಶಂಕಿತ ಉಗ್ರ ಸೈಯದ್ ಇಸ್ಮಾಯಿಲ್ ಅಫಾಕ್‌ಗೆ ಜೈನಲುದ್ದೀನ್ ಸರಬರಾಜು ಮಾಡಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಅಧಿಕಾರಿ ಹೇಳಿದರು.

‘ಪುಲಕೇಶಿ‌ನಗರದಲ್ಲಿರುವ ಮನೆಯಲ್ಲಿ ಈಗಾಗಲೇ ಮಹಜರು ನಡೆಸಲಾಗಿದೆ. ಇನ್ನಷ್ಟು ಕಡೆಗಳಲ್ಲಿ ಮಹಜರು ನಡೆಸಬೇಕಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.