ADVERTISEMENT

ಕರಗದ ಕುಂಟೆಯಲ್ಲಿ ಪ್ರಥಮ ಪೂಜೆ

ಧ್ವಜಾರೋಹಣ ಮೂಲಕ ‘ಬೆಂಗಳೂರು ಕರಗ ಶಕ್ತ್ಯೋತ್ಸವ’ ಆರಂಭ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 20:52 IST
Last Updated 30 ಮಾರ್ಚ್ 2023, 20:52 IST
ಕಬ್ಬನ್‍ಪಾರ್ಕ್‌ನ ಕರಗದ ಕುಂಟೆಯಲ್ಲಿ ಗುರುವಾರ ಪೂಜೆ ಸಲ್ಲಿಸಿ ತೆರಳುತ್ತಿರುವ ಕರಗಕರ್ತ ಎ. ಜ್ಞಾನೇಂದ್ರ ಹಾಗೂ ಇತರ ವೀರಕುಮಾರರು  –ಪ್ರಜಾವಾಣಿ ಚಿತ್ರ
ಕಬ್ಬನ್‍ಪಾರ್ಕ್‌ನ ಕರಗದ ಕುಂಟೆಯಲ್ಲಿ ಗುರುವಾರ ಪೂಜೆ ಸಲ್ಲಿಸಿ ತೆರಳುತ್ತಿರುವ ಕರಗಕರ್ತ ಎ. ಜ್ಞಾನೇಂದ್ರ ಹಾಗೂ ಇತರ ವೀರಕುಮಾರರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪಾರಂಪರಿಕ ‘ಬೆಂಗಳೂರು ಕರಗ ಶಕ್ತ್ಯೋತ್ಸವ’ ಆರಂಭವಾಗಿದ್ದು, ಬುಧವಾರ ರಾತ್ರಿ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ತಿಗಳರಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ ತಳಿರು–ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಬುಧವಾರದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು.

ತಿಗಳ ಸಮುದಾಯದ ಅರ್ಚಕ ಎ. ಜ್ಞಾನೇಂದ್ರ ಅವರು ಈ ಬಾರಿ ಕರಗ ಹೊರಲಿದ್ದು, ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಗೌಡರು, ಗಣಾಚಾರಿ ಹಾಗೂ ಗಂಟೆ ಪೂಜಾರಿಗಳ ಜತೆ ಮೊದಲನೇ ಸ್ನಾನಘಟ್ಟ ಕಬ್ಬನ್‍ಪಾರ್ಕ್‍ನ ಕರಗದ ಕುಂಟೆಗೆ ತೆರಳಿ ಅಲ್ಲಿ ಪ್ರಥಮ ಪೂಜೆ, ಗಂಗೆ ಪೂಜೆ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ರಾಮನವಮಿ ಅಂಗವಾಗಿ ಕೋಸಂಬರಿ ಮತ್ತು ಪಾನಕವನ್ನು ವಿತರಣೆ ಮಾಡಲಾಯಿತು. ಸಂಜೆ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ADVERTISEMENT

‘ಸಂಪಂಗಿ ಕೆರೆಯ ಅಂಗಳದಲ್ಲಿನ ಶಕ್ತಿ ಪೀಠದಲ್ಲಿ ಶುಕ್ರವಾರ ದ್ವಿತೀಯ ಪೂಜೆ ನಡೆಯಲಿದೆ. ‌ಶನಿವಾರ ಲಾಲ್‍ಬಾಗ್ ರಸ್ತೆಯ ಹೂವಿನ ತೋಟದಲ್ಲಿ, ಭಾನುವಾರ ಗವಿಪುರ ಗುಟ್ಟಹಳ್ಳಿಯ ಜಲಕಂಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ಸೋಮವಾರ ಕೆಂಪೇಗೌಡ ವೃತ್ತದ ಅಣ್ಣಮ್ಮ ದೇವಸ್ಥಾನ, ಮಂಗಳವಾರ ಕಬ್ಬನ್ ಪಾರ್ಕ್‍ನ ಕರಗದ ಕುಂಟೆ, ಬುಧವಾರ ಕಲಾಸಿಪಾಳ್ಯದ ಮರಿಸ್ವಾಮಿ ಮಠದಲ್ಲಿ ಪೂಜೆ ನಡೆಯಲಿದೆ’ ಎಂದು ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ. ಸತೀಶ್ ಮಾಹಿತಿ ನೀಡಿದರು.

‘ಹೂವಿನ ಕರಗ ಏಪ್ರಿಲ್‌ 6ರ ರಾತ್ರಿ 11.30ಕ್ಕೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡುವ ಉತ್ಸವ ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ಕಬ್ಬನ್‌ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಕೆ.ಆರ್‌. ಮಾರುಕಟ್ಟೆ, ಆಕ್ಕಿಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣ್ಣಕಲ್‌ ಪೇಟೆಗಳಲ್ಲಿ ಸಂಚರಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.