ADVERTISEMENT

ಚಿಂತನೆ ನಡೆಸುವುದು ಕೊಲೆಗೆ ಆಹ್ವಾನಿಸಿದಂತೆ ಎಂಬ ಸನ್ನಿವೇಶ ಇದೆ: ರಹಮತ್‌ ತರೀಕೆರೆ

‘ಕುವೆಂಪು ಸಾಹಿತ್ಯ ದರ್ಶನ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರಹಮತ್‌ ತರೀಕೆರೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 15:33 IST
Last Updated 5 ಫೆಬ್ರುವರಿ 2025, 15:33 IST
<div class="paragraphs"><p>‘ಕುವೆಂಪು ಸಾಹಿತ್ಯ ದರ್ಶನ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನಾ ಸಮಾಂಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಅವರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. </p></div>

‘ಕುವೆಂಪು ಸಾಹಿತ್ಯ ದರ್ಶನ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣದ ಉದ್ಘಾಟನಾ ಸಮಾಂಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಅವರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

   

ಬೆಂಗಳೂರು: ವಿಚಾರವಾದ ಎಂಬ ಶಬ್ದವನ್ನೇ ಅಶ್ಲೀಲ ಮಾಡಲಾಗಿದೆ. ಚಿಂತನೆ, ವಿಚಾರ, ವಿಮರ್ಶೆ ಮಾಡುವುದು ಎಂದರೆ ಕೊಲೆಗೆ ಆಹ್ವಾನ ನೀಡಿದಂತೆ ಎಂಬ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಸಂಸ್ಕೃತಿ ಚಿಂತಕ ರಹಮತ್‌ ತರೀಕೆರೆ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಹಮ್ಮಿಕೊಂಡಿದ್ದ ‘ಕುವೆಂಪು ಸಾಹಿತ್ಯ ದರ್ಶನ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬುಧವಾರ ಅವರು ಮಾತನಾಡಿದರು.

ADVERTISEMENT

‘ಸಮಾಜವನ್ನು ವಿಮೋಚನಾ ಸಮಾಜವನ್ನಾಗಿ ಮಾಡಲು ಬುದ್ಧ, ಚಾರ್ವಾಕ,‌ ಶರಣರು, ಕುವೆಂಪು, ಪೆರಿಯಾರ್‌, ಅಂಬೇಡ್ಕರ್ ಸಹಿತ ಚಿಂತನೆ ನಡೆಸಿದ ದೊಡ್ಡ ಪರಂಪರೆಯೇ ನಮಗಿದೆ. ಪ್ರತಿಗಾಮಿಗಳು ಆಗಲೂ ಇದ್ದರು. ಆದರೆ, ಬರಹಗಾರರು, ಚಿಂತಕರು ಪೊಲೀಸ್ ರಕ್ಷಣೆಯಲ್ಲಿ ಬದುಕಬೇಕಾದ ಪರಿಸ್ಥಿತಿ ಆಗ ಇರಲಿಲ್ಲ’ ಎಂದು ತಿಳಿಸಿದರು.

‘ಸಮಾಜದಲ್ಲಿ ಸ್ಥಾಪಿತ ಹಿತಾಸಕ್ತಿ ಇದೆ. ಅದರ ವಿರುದ್ಧ ಸಮಾನತೆಗಾಗಿ ಹೋರಾಟ ನಡೆಸುವುದು, ದಮನಿತರ ಪರವಾಗಿ ಅನುಭೂತಿ, ಪ್ರೀತಿಯೊಂದಿಗೆ ಒಳಗೊಳ್ಳುವುದು, ವಿಮೋಚಿತ ಸಮಾಜವನ್ನು ನಿರ್ಮಾಣ ಮಾಡುವುದು ಬುದ್ಧನಿಂದ ಹಿಡಿದು ಕುವೆಂಪುವರೆಗೆ ಎಲ್ಲ ಕ್ರಾಂತಿಕಾರಿಗಳ ಲಕ್ಷಣವಾಗಿತ್ತು. ಸಮಾಜದಲ್ಲಿ ಕೆಲವು ಕೊರತೆಗಳಿವೆ. ಅದನ್ನು ಸರಿಪಡಿಸಬೇಕು ಎಂಬುದು ಅವರ ಚಿಂತನೆಯಾಗಿತ್ತು. 20ನೇ ಶತಮಾನವು ಇಂಥ ಚಿಂತನೆಗಳಿಂದ ಝಗಮಗಿಸಿತ್ತು. 21ನೇ ಶತಮಾನದಲ್ಲಿ ಮಹಾಜ್ಞಾನವಿರೋಧಿ ಸಮಾಜವಾಗಿ ಭಾರತ ರೂಪುಗೊಳ್ಳುತ್ತಿದೆ’ ಎಂದು ಬೇಸರಿಸಿದರು.

ಕಾಲೇಜುಗಳು ಜ್ಞಾನ ಪಸರಿಸುವ ಕೇಂದ್ರಗಳಾಗಿದ್ದವು. ಈಗ ಅಧ್ಯಾಪಕರಿಗೆ ವಿದ್ಯಾರ್ಥಿಗಳೇ ಶತ್ರುಗಳಾಗಿದ್ದಾರೆ. ತರಗತಿಗಳು ಗೂಢಚಾರ ತಾಣಗಳಾಗಿವೆ. ದೇಶದಲ್ಲಿ ರಾಜಕಾರಣಿಗಳು ಧಾರ್ಮಿಕ ನಾಯಕರಂತೆ ಮಾತನಾಡುತ್ತಿದ್ದಾರೆ. ಧಾರ್ಮಿಕ ಗುರುಗಳು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಉದ್ಘಾಟನೆ: ವಿಚಾರ ಸಂಕಿರಣವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಉದ್ಘಾಟಿಸಿದರು. ಕಲಾನಿಕಾಯದ ಡೀನ್‌ ಜ್ಯೋತಿ ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಟಿ. ಜವರೇಗೌಡ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ತಾಂಡವಗೌಡ, ಸಿಂಡಿಕೇಟ್‌ ಸದಸ್ಯೆ ಆಯೇಷಾ ಫರ್ಝಾನ, ಪ್ರಾಧ್ಯಾಪಕರಾದ ಗೀತಾ ವಸಂತ, ಮೇಟಿ ಮಲ್ಲಿಕಾರ್ಜುನ ಭಾಗವಹಿಸಿದ್ದರು.

ವೈಜ್ಞಾನಿಕ ಮನೋಭಾವ ವೈಚಾರಿಕ ದೃಷ್ಟಿಕೋನ ಅಧ್ಯಾತ್ಮ ಸಮ್ಮಿಲನದ ಸರ್ವೋದಯ ಸಮನ್ವಯ ಜೀವನ ತತ್ವಗಳು ಕುವೆಂಪು ನೀಡಿದ ಬೆಳಕು.
ಲಿಂಗರಾಜ ಗಾಂಧಿಕುಲಪತಿ ಬೆಂಗಳೂರು ನಗರ ವಿಶ್ವವಿದ್ಯಾಲಯ
ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಮಾನಸಿಕ ಸಿದ್ಧತೆಯನ್ನು ಕುವೆಂಪು ಸಾಹಿತ್ಯವು ನೀಡಿದೆ.
ಕೆ.ವೈ. ನಾರಾಯಣಸ್ವಾಮಿ ಪ್ರಾಧ್ಯಾಪಕ ಬೆಂಗಳೂರು ಸರ್ಕಾರಿ ಕಲಾ ಕಾಲೇಜು
ನವ್ಯದ ಕಾಲದಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಕಡೆಗಣಿಸುವ ಪ್ರಯತ್ನ ನಡೆದರೂ ಅವರ ಸಾಹಿತ್ಯದ ಘನತೆ ಮತ್ತು ಮೌಲ್ಯ ಕುಗ್ಗಿಸಲು ಆಗಲಿಲ್ಲ.
ತಾರಕೇಶ್ವರ ವಿ.ಬಿ. ಪ್ರಾಧ್ಯಾಪಕ ಇಂಗ್ಲಿಷ್‌ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ
ಕನ್ನಡದಲ್ಲಿ ದರ್ಶನ ಚಿಂತನ ವರ್ಣನಾ ಕ್ರಮದಲ್ಲಿ ಆಧುನಿಕ ವಿಮರ್ಶೆಯು ಕುವೆಂಪು ಅವರಿಂದ ಆರಂಭವಾಯಿತು.
ಎಸ್‌.ಆರ್‌. ವಿಜಯಶಂಕರ್‌ ವಿಮರ್ಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.