ADVERTISEMENT

ಕಾರು ಪಂಕ್ಚರ್ ಮಾಡಿ ₹ 3 ಲಕ್ಷ ಕದ್ದೊಯ್ದರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 20:17 IST
Last Updated 15 ಡಿಸೆಂಬರ್ 2022, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಮಹಿಳಾ ಉದ್ಯಮಿಯೊಬ್ಬರ ಕಾರು ಪಂಕ್ಚರ್ ಮಾಡಿ ಗಮನ ಬೇರೆಡೆ ಸೆಳೆದು ₹ 3 ಲಕ್ಷ ಕಳ್ಳತನ ಮಾಡಲಾಗಿದೆ.

‘ಲಗ್ಗೆರೆ ನಿವಾಸಿಯಾಗಿರುವ 48 ವರ್ಷದ ಮಹಿಳಾ ಉದ್ಯಮಿ ಕಳ್ಳತನ ಬಗ್ಗೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳಾ ಉದ್ಯಮಿ ಹಾಗೂ ಅವರ ಪತಿ, ರಾಜಾಜಿನಗರ ನವರಂಗ ವೃತ್ತ ಬಳಿಯ ಯೂನಿಯನ್ ಬ್ಯಾಂಕ್‌ ಶಾಖೆಗೆ ಕಾರಿನಲ್ಲಿ ಹೋಗಿದ್ದರು. ಚಾಲಕನನ್ನು ಕಾರಿನಲ್ಲಿ ಕೂರಿಸಿ ದಂಪತಿ ಮಾತ್ರ ಬ್ಯಾಂಕ್‌ನೊಳಗೆ ತೆರಳಿದ್ದರು. ಇವರಿಬ್ಬರನ್ನೂ ಹಿಂಬಾಲಿಸಿಕೊಂಡು ಆರೋಪಿಯೊಬ್ಬ ಬ್ಯಾಂಕ್‌ನೊಳಗೆ ಹೋಗಿದ್ದ. ಅದನ್ನು ನೋಡಿದ್ದ ಮಹಿಳಾ ಉದ್ಯಮಿಗೆ ಅನುಮಾನ ಬಂದಿತ್ತು. ಆದರೆ, ಹೆಚ್ಚು ತಲೆ ಕೆಡೆಸಿಕೊಂಡಿರಲಿಲ್ಲ.’

ADVERTISEMENT

‘₹ 3 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದ ಮಹಿಳಾ ಉದ್ಯಮಿ ಹಾಗೂ ಪತಿ, ಬ್ಯಾಂಕ್‌ನಿಂದ ಹೊರಬಂದು ಕಾರಿನಲ್ಲಿ ಕುಳಿತು ಮನೆಯತ್ತ ಹೊರಟಿದ್ದರು. ಆರೋಪಿಯೊಬ್ಬ ಬೈಕ್‌ನಲ್ಲಿ ಅವರ ಕಾರು ಹಿಂಬಾಲಿಸುತ್ತಿದ್ದ. ಶಂಕರಮಠ ಜಂಕ್ಷನ್ ಬಳಿ ಕಾರು ನಿಲ್ಲಿಸಿದ್ದ
ಆರೋಪಿ, ‘ನಿಮ್ಮ ಕಾರಿನ ಚಕ್ರ ಪಂಕ್ಚರ್ ಆಗಿದೆ’ ಎಂದಿದ್ದ. ಕೆಳಗೆ ಇಳಿದು ಚಾಲಕ ಪರಿಶೀಲಿಸಿದಾಗ, ಪಂಕ್ಚರ್ ಗಮನಕ್ಕೆ ಬಂದಿತ್ತು. ನಂತರ, ಸಮೀಪದಲ್ಲೇ ಇದ್ದ ಪಂಕ್ಚರ್ ಅಂಗಡಿಯತ್ತ ಚಾಲಕ ಕಾರು ಚಲಾಯಿಸಿಕೊಂಡು ಹೋಗಿದ್ದ. ಆರೋಪಿಯು ಕಾರಿನ ಬಳಿಯೇ
ಸುತ್ತಾಡುತ್ತಿದ್ದ.’

‘ಮಹಿಳಾ ಉದ್ಯಮಿ, ಅವರ ಪತಿ ಹಾಗೂ ಚಾಲಕ ಕಾರಿನಿಂದ ಇಳಿದಿದ್ದರು. ಇದೇ ಸಂದರ್ಭದಲ್ಲೇ ಮತ್ತೊಬ್ಬನನ್ನು ಸ್ಥಳಕ್ಕೆ ಕರೆಸಿದ್ದ ಆರೋಪಿ, ಕಾರಿನಲ್ಲಿದ್ದ ಹಣದ ಬ್ಯಾಗ್ ಕದ್ದುಕೊಂಡು ಪರಾರಿಯಾಗಿದ್ದಾನೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.