ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮಗಳ ಜತೆ ಸಲುಗೆಯಿಂದ ಇರಬೇಡ ಎಂದು ಬುದ್ದಿ ಹೇಳಿದ ತಂದೆಯನ್ನು ಕೆಲಸಗಾರನೇ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಹೊರ ವರ್ತುಲ ರಸ್ತೆ ಬಳಿಯಿರುವ ಎಸ್.ಬಿ ಟಿಂಬರ್ ಅಂಗಡಿಯಲ್ಲಿ ನಡೆದಿದೆ.
ಟಿಂಬರ್ ಅಂಗಡಿ ಮಾಲೀಕನ ಸಹೋದರ ಸೈಯದ್ ಅಸ್ಲಮ್ (60) ಕೊಲೆಯಾದವರು. ಇಲಿಯಾಸ್ ನಗರದ 23 ವರ್ಷದ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಸೈಯದ್ ಅಸ್ಲಮ್ ಅವರು ತನ್ನ ಸಹೋದರನ ಟಿಂಬರ್ ಅಂಗಡಿಯ ಮೇಲ್ವಿಚಾರಣೆ ಮಾಡುತ್ತಿದ್ದರು. ಅದೇ ಅಂಗಡಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆರೋಪಿ, ಮೃತರ ಮಗಳೊಂದಿಗೆ ಸಲುಗೆಯಿಂದ ಇರುತ್ತಿದ್ದ. ಇದನ್ನು ಸಹಿಸದ ಸೈಯದ್, ‘ಮಗಳ ತಂಟೆಗೆ ಬರಬೇಡ’ ಎಂದು ಆರೋಪಿಗೆ ಎಚ್ಚರಿಸಿದ್ದರು. ಬೆಳಿಗ್ಗೆ ಪಾನಮತ್ತನಾಗಿ ಅಂಗಡಿ ಬಳಿ ಬಂದಿದ್ದ ಆರೋಪಿ ಹಾಗೂ ಸೈಯದ್ ಮಧ್ಯೆ ಇದೇ ವಿಚಾರವಾಗಿ ಗಲಾಟೆಯಾಗಿತ್ತು. ಸಿಟ್ಟಿಗೆದ್ದ ಆರೋಪಿ, ಅಂಗಡಿಯಲ್ಲಿದ್ದ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
‘ಮಗಳ ಜತೆ ಸಲುಗೆ ಬೇಡ ಎಂದು ಹೇಳಿದಕ್ಕೆ ಸೈಯದ್ ಅವರನ್ನು ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.