ಬೆಂಗಳೂರು: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ಕೆ.ಆರ್.ಪುರ ತಾಲ್ಲೂಕು ಆಸ್ಪತ್ರೆ ವತಿಯಿಂದ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಜಿಲ್ಲಾ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು,‘ಕುಷ್ಠರೋಗವನ್ನು 2020 ವೇಳೆಗೆ ಸಂಪೂರ್ಣವಾಗಿ ನಿಯಂತ್ರಣ ಮಾಡಲು ಆರೋಗ್ಯ ಇಲಾಖೆ ಬದ್ಧವಾಗಿದೆ. ಕುಷ್ಠರೋಗದಿಂದ ಅಂಗವಿಕಲತೆ ಆಗದಂತೆ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ರೋಗ ಪತ್ತೆ ಹಚ್ಚುವ ಕಾರ್ಯಕ್ರಮ ಬೆಂಗಳೂರು ನಗರದಿಂದ ಆರಂಭ ಮಾಡಲಾಗಿದೆ. ಅಶಾ, ಅಂಗನವಾಡಿ, ಹಾಗೂ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರ ಮನೆಮನೆಗೆ ತೆರಳಿ ಕುಷ್ಠರೋಗದ ಚಿಹ್ನೆಗಳಿದ್ದಲ್ಲಿ ಗುರುತಿಸಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಕೊಡಿಸಿದರೆ ಈ ರೋಗ ಗುಣಪಡಿಸಬಹುದು. ಬೆಂಗಳೂರು ನಗರದಲ್ಲಿ 3,850 ತಂಡಗಳನ್ನು ರಚಿಸಲಾಗಿದ್ದು, 7,550 ಜನ ಆರೋಗ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದರು.
ಬೆಂಗಳೂರು ನಗರ ಜಿಲ್ಲಾ ಕುಷ್ಠರೋಗ ವಿಭಾಗದ ವೈದ್ಯಾಧಿಕಾರಿ ಡಾ.ನದೀಮ್ ಅಹಮದ್ ಮಾತನಾಡಿ, ‘ಬೆಂಗಳೂರು ನಗರದಲ್ಲಿ 120 ಜನರಿಗೆ ಕುಷ್ಠರೋಗ ಇರುವುದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಂದೋಲನವು ಅ. 22ರಿಂದ ನ. 4ರವರೆಗೆ ನಡೆಯಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.