ಬೆಂಗಳೂರು:ಪೌಷ್ಟಿಕ ಆಹಾರದ ಬೆಂಬಲ ಸೇರಿದಂತೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ 2025ರ ವೇಳೆಗೆ ರಾಜ್ಯವನ್ನು ಕ್ಷಯ ರೋಗ (ಟಿ.ಬಿ) ಮುಕ್ತ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
‘ಕ್ಷಯ ರೋಗ ನಿರ್ಮೂಲನೆಗೆ ಗ್ರಾಮ ಪಂಚಾಯಿತಿ ಮಟ್ಟ ದಲ್ಲಿಯೇ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು. ಈಗಾಗಲೇ ನಮ್ಮ ದೇಶವನ್ನು ಪೋಲಿಯೊ ಮುಕ್ತ ಮಾಡಲಾಗಿದೆ. ಆದರೆ, ಇದಕ್ಕಿಂತ ಹಿಂದೆ ಕಾಣಿಸಿಕೊಂಡಿದ್ದ ಕ್ಷಯವನ್ನು ಇನ್ನೂ ಹೋಗಲಾಡಿಸಲು ಸಾಧ್ಯವಾಗಲಿಲ್ಲ. 2025ರ ವೇಳೆಗೆಕ್ಷಯಮುಕ್ತ ದೇಶ ನಿರ್ಮಾಣದ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ರಾಜ್ಯದಲ್ಲಿ ಕೂಡ ಪೂರಕ ಕಾರ್ಯಕ್ರಮಗಳ ಮೂಲಕ ರೋಗವನ್ನು ನಿವಾರಿಸಬೇಕು’ ಎಂದು ತಿಳಿಸಿದ್ದಾರೆ.
‘ಗ್ರಾಮಪಂಚಾಯಿತಿ ಕಾರ್ಯಪಡೆಯಲ್ಲಿ ಟಿ.ಬಿ ಕಾರ್ಯಕ್ರಮದ ಸಿಬ್ಬಂದಿಯನ್ನು ಸದಸ್ಯರನ್ನಾಗಿ ಸೇರಿಸಬೇಕು. ಕುಟುಂಬ ಕಾರ್ಯಪಡೆ ಮತ್ತು ಗ್ರಾಮ ಆರೋಗ್ಯ, ನೈರ್ಮಲ್ಯ ಹಾಗೂ ಪೌಷ್ಟಿಕತೆ ಸಮಿತಿ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಕ್ಷಯ ಮುಕ್ತಗೊಳಿಸಲು ಕಾರ್ಯತಂತ್ರ ರೂಪಿಸ ಬೇಕು. ತಿಂಗಳಿಗೊಮ್ಮೆ ಸಭೆ ನಡೆಸಿ, ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಬೇಕು’ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ಗಳು ಟಿ.ಬಿ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.