ಬೆಂಗಳೂರು: ‘ಹೃದಯ ಭಾವನೆಗಳ ಇನ್ನೊಂದು ರೂಪವೇ ಭಾಷೆ. ತುಳುನಾಡಿನವರಿಗೆ ಎರಡು ಭಾಷೆಗಳಿವೆ. ಕನ್ನಡ ರಾಜ್ಯ ಭಾಷೆಯಾದರೆ, ತುಳು ಮಾತೃಭಾಷೆಯಾಗಿದೆ. ಈ ಎರಡು ಭಾಷೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಬೆಂಗಳೂರಿನ ‘ತುಳುವೆರೆ ಚಾವಡಿ’ಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ‘ಜೋಕುಲೆ ಉಜ್ಜಾಲ್’ ತುಳು ಪದಮಾಲೆ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಈಗಾಗಲೇ ಸರ್ಕಾರ ಈ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಿದ್ದು, ಅದನ್ನು ಜಾರಿಗೊಳಿಸಲು ತುಳುನಾಡಿನವರು ಒಗ್ಗಟ್ಟಿನಿಂದ ಇರಬೇಕು’ ಎಂದು ಮನವಿ ಮಾಡಿದರು.
ಯಕ್ಷಗಾನ ಕಲಾವಿದರಾದ ಸೀತಾರಾಮ ಕುಮಾರ್ ಕಟೀಲ್, ತುಳು ಸಾಹಿತಿಗಳಾದ ಕುಶಲಾಕ್ಷಿ ವಿ. ಕಣ್ವತೀರ್ಥ, ಸಮಾಜ ಸೇವೆಗಾಗಿ ರವಿ ಕಟಪಾಡಿ ಮತ್ತು ಪ್ರಕಾಶ್ ಜೆ. ಶೆಟ್ಟಿಗಾರ್ ಅವರಿಗೆ ‘ತುಳುನಾಡ್ದ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಕೆ.ಇ. ರಾಧಾಕೃಷ್ಣ ಅವರ ‘ಸತ್ಯಪ್ಪೆ ಬಾಲೆಲು’ ತುಳು ಕಥೆಯ ಆಡಿಯೊ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಬೆಳ್ಳಿ ಹಬ್ಬ ಸಂಭ್ರಮದ ಅಂಗವಾಗಿ ತುಳು ಸಾಹಿತಿ ಉಗಪ್ಪ ಪೂಜಾರಿ (ತುಳು– ಕನ್ನಡ ಸಾಹಿತಿ ಡಿ.ಕೆ. ಚೌಟ ಅವರ ಸಂಸ್ಮರಣಾರ್ಥ) ಮತ್ತು ಯುವ ಪ್ರತಿಭೆ ಸತೀಶ್ ಅಗ್ಪಲ್ (ಸಾಮಾಜಿಕ ಚಿಂತಕ, ತುಳು ಹೋರಾಟಗಾರ ಡಾ. ಉದಯ ಧರ್ಮಸ್ಥಳ ಸಂಸ್ಮರಣಾರ್ಥ) ಪ್ರಶಸ್ತಿ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.