ಬೆಂಗಳೂರು: ತುಮಕೂರಿನ ಮಾಜಿ ಮೇಯರ್ ರವಿಕುಮಾರ್ ಕೊಲೆ ಪ್ರಕರಣದ ಸಂಬಂಧ ಸಿಸಿಬಿ ಪೊಲೀಸರು ರೌಡಿ ಸುನೀಲ್ ಅಲಿಯಾಸ್ ‘ಸೈಲೆಂಟ್’ ಸುನೀಲನನ್ನು ಗುರುವಾರ ವಿಚಾರಣೆಗೆ ಒಳಪಡಿಸಿದರು.
‘ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಜಯ್, ಕನ್ನಡ ಪರ ಸಂಘಟನೆಯೊಂದರ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ. ಅದೇ ಸಂಘಟನೆಯಲ್ಲಿ ಸುನೀಲ್ ಸಹ ಗುರುತಿಸಿಕೊಂಡಿದ್ದ. ಅಲ್ಲದೆ, ಹತ್ಯೆಗೂ ಕೆಲ ದಿನಗಳ ಮುನ್ನ ಇಬ್ಬರೂ ತುಮಕೂರಿನ ಹೋಟೆಲ್ವೊಂದರಲ್ಲಿ ಕುಳಿತು ಮಾತುಕತೆ ನಡೆಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಹತ್ಯೆಯಲ್ಲಿ ಸುನೀಲ್ನ ಪಾತ್ರವೂ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಆದರೆ, ‘ಮಾಜಿ ಮೇಯರ್ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಸಂಘಟನೆಯ ಕೆಲಸದ ಬಗ್ಗೆ ಮಾತನಾಡಲು ಸುಜಯ್ನನ್ನು ಹೋಟೆಲ್ನಲ್ಲಿ ಭೇಟಿಯಾಗಿದ್ದೆ ಅಷ್ಟೆ’ ಎಂದು ಹೇಳಿಕೆ ಕೊಟ್ಟಿದ್ದಾನೆ. ಬೇರೆ ಬೇರೆ ಆಯಾಮಗಳಲ್ಲಿ ವಿಚಾರಣೆ ಮುಂದುವರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.