ADVERTISEMENT

ಜಾತಿಗಣತಿ ಅವೈಜ್ಞಾನಿಕ: ವರದಿ ಮಂಡಿಸದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 19:24 IST
Last Updated 25 ಜೂನ್ 2023, 19:24 IST
ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್
ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್   

ಪೀಣ್ಯ ದಾಸರಹಳ್ಳಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬ ಜಾತಿಗಣತಿ ವರದಿ ಅವೈಜ್ಞಾನಿಕ. ಮಂಡನೆಯಾಗುವ ಮೊದಲೇ ಸೋರಿಕೆಯೂ ಆಗಿದೆ. ಈ ವರದಿಯನ್ನು ಯಾವುದೇ ಕಾರಣಕ್ಕೆ ಮಂಡಿಸಬಾರದು ಎಂದು ಒಕ್ಕಲಿಗ ಮುಖಂಡರ ಸಮಾಲೋಚನಾ ಸಭೆಯಲ್ಲಿ ಆಗ್ರಹಿಸಲಾಗಿದೆ.

‘ಜಾತಿಗಣತಿ ರಾಜಕೀಯ; ಒಕ್ಕಲಿಗರಿಗೆ ಅನ್ಯಾಯ’ ಎಂಬ ಘೋಷವಾಕ್ಯ ಇಟ್ಟುಕೊಂಡು ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ. ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಆಗ್ರಹ ಮಾಡಲಾಗಿದೆ.

ಈ ವರದಿಯನ್ನು ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ದಲಿತ ಮತ್ತು ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಜೊತೆಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಹೇಳಿದ್ದರು. ಹೊಸದಾಗಿ ಗಣತಿ ನಡೆಸಿದರೆ ಅಭ್ಯಂತರವಿಲ್ಲ. ಈ ವರದಿ ಮಂಡಿಸಬಾರದು ಎಂದು ಸಭೆಯಲ್ಲಿ ಭಾಗವಹಿಸಿದವರು ಒತ್ತಾಯಿಸಿದರು.

ADVERTISEMENT

‘ಈ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯಿತರ ಮತ್ತು ಒಕ್ಕಲಿಗರ ಸಂಖ್ಯೆ ಕಡಿಮೆ ತೋರಿಸಲಾಗಿದೆ. ವರದಿ ಸೋರಿಕೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ವೀರಶೈವ ಲಿಂಗಾಯಿತರ ಸಂಖ್ಯೆ 59 ಲಕ್ಷ, ಒಕ್ಕಲಿಗರ ಸಂಖ್ಯೆ 49 ಲಕ್ಷ ಎಂದು ತೋರಿಸಲಾಗಿದೆ. ಅಹಿಂದ ವರ್ಗಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆ ಉದ್ದೇಶದಿಂದ ಇತರ ಸಮುದಾಯಗಳಿಗೆ ಅನ್ಯಾಯ ಮಾಡಬಾರದು’ ಎಂದು ತಿಳಿಸಿದರು.

ಒಕ್ಕಲಿಗರ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಸಮುದಾಯದ ಮುಖಂಡರು ಭಾಗವಹಿಸಿದ್ದರು. ಮುಂದೆ ಬೃಹತ್‌ ಸಭೆ ನಡೆಸಲು ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.