ಬೆಂಗಳೂರು: ‘ಕೊರೊನಾ ಮೂರನೇ ಅಲೆ ತಡೆಗೆ ಲಸಿಕೆ ಸಹಕಾರಿಯಾಗಲಿದೆ. ಹಾಗಾಗಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆಯನ್ನು ಆದಷ್ಟು ಬೇಗ ಹಾಕಿಸಿಕೊಳ್ಳಬೇಕು’ ಎಂದು ಶಾಸಕ ಎಲ್.ಎ. ರವಿಸುಬ್ರಮಣ್ಯ ತಿಳಿಸಿದರು.
ಜಯನಗರದ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ರೋಟರ್ಯಾಕ್ಟ್ ಬೆಂಗಳೂರು ಸೌತ್ ನಗರದಲ್ಲಿ ಶನಿವಾರ ಆಯೋಜಿಸಿದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ, ಮಾತನಾಡಿದರು. ‘ಕೋವಿಡ್ ಮೂರನೇ ಅಲೆಯ ಮುನ್ಸೂಚನೆ ಗೋಚರಿಸಲಾರಂಭಿಸಿದೆ. ಈ ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ಹೋರಾಡಲು ಲಸಿಕೆಯೇ ಪ್ರಮುಖ ಅಸ್ತ್ರ. ಹಾಗಾಗಿ, ಜನರು ಜಾಗೃತರಾಗಿ ಲಸಿಕೆಗಳನ್ನು ಪಡೆದುಕೊಳ್ಳಬೇಕು’ ಎಂದರು.
ಯುನೈಟೆಡ್ ಆಸ್ಪತ್ರೆಯ ಸಂಸ್ಥಾಪಕ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿ, ‘ಕೋವಿಡ್ ಮೊದಲೆರಡು ಅಲೆಯಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡಬಾರದು. ಲಸಿಕೆ ಪಡೆದುಕೊಳ್ಳದಿದ್ದಲ್ಲಿ ಸೋಂಕುಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಆದ್ದರಿಂದ ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಜಾಥಾದಲ್ಲಿ ಭಾಗವಹಿಸಿದ ಸೈಕಲ್ ಸವಾರರಿಗೆ ಉಚಿತವಾಗಿ ಎರಡೂ ಡೋಸ್ ಲಸಿಕೆ ನೀಡುತ್ತಿದ್ದೇವೆ’ ಎಂದು ಹೇಳಿದರು.
ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್ ಮುರುಡಾ, ‘ಲಸಿಕೆಯು ಎಲ್ಲರಿಗೂ ದೊರೆಯುವಂತಾಗಬೇಕೆಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ನಾವು ಒದಗಿಸುತ್ತಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.