ಬೆಂಗಳೂರು: ‘ಕನ್ನಡ ಚಳವಳಿಗಾರರನ್ನು ಪುಂಡರೆಂದು ಕರೆದಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವಿವೇಕಿ’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮಾರ್ವಾಡಿಗಳ ಪರ ವಕಾಲತ್ತು ವಹಿಸಿರುವ ಸಂಸದ ತೇಜಸ್ವಿಸೂರ್ಯ ಅವರು ಅನಂತಕುಮಾರ್ ಅವರ ಶಿಷ್ಯ ಎನ್ನಲು ಅವಮಾನ ಆಗುತ್ತದೆ. ಸಂಸದ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಬೆಂಗಳೂರು ನೂರಕ್ಕೆ ನೂರರಷ್ಟು ಕನ್ನಡಿಗರ ರಾಜಧಾನಿ ಆಗಬೇಕು. ಮಾರ್ವಾಡಿಗಳು ಎಲ್ಲಾ ವ್ಯವಹಾರವನ್ನು ಕನ್ನಡದಲ್ಲೇ ಮಾಡಬೇಕು. ಹಿಂದಿ ಹೇರುವ ಕುತಂತ್ರವನ್ನು ನಾವು ಸಹಿಸುವುದಿಲ್ಲ. ಇದು ಮುಂದುವರಿದರೆ ಮಾರ್ವಾಡಿಗಳೇ ವಾಪಸ್ ಹೋಗಿ ಎಂಬ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಉತ್ತರ ಕರ್ನಾಟಕದ ಪ್ರವಾಹ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲೇಬೇಕು. ಇಲ್ಲವಾದರೆ ಆ.24 ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.