ಬೆಂಗಳೂರು: ವೆಂಕಟಪ್ಪ ಚಿತ್ರಶಾಲೆಯ (ಆರ್ಟ್ ಗ್ಯಾಲರಿ) ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಕಲಾವಿದರನ್ನು ಕಡೆಗಣಿಸಿರುವ ಸರ್ಕಾರದ ನಡೆಯನ್ನು ಖಂಡಿಸಿ ಕಾರ್ಯಕ್ರಮ ಬಹಿಷ್ಕರಿಸಿದ್ದ ಕಲಾವಿದರ ಸಮೂಹ, ಶುಕ್ರವಾರದಂದು ಚಿತ್ರಶಾಲೆ ಪ್ರವೇಶಿಸಿ ಸಂಭ್ರಮಿಸಿತು.
ಈ ಚಿತ್ರಶಾಲೆಯ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕಲಾವಿದರನ್ನು ಕಡೆಗಣಿಸಿ, ರಾಜಕಾರಣಿಗಳಿಗೆ ಮಾತ್ರ ಆದ್ಯತೆ ನೀಡಿದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಕಲಾವಿದರ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಲಾಖೆಯು ಗುರುವಾರ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿಸುವಂತೆ ಕರೆ ನೀಡಿದ್ದ ವೆಂಕಟಪ್ಪ ಆರ್ಟ್ ಗ್ಯಾಲರಿ ಫೋರಂ, ಶುಕ್ರವಾರದಂದು ಗ್ಯಾಲರಿ ಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ನೂರಾರು ಕಲಾವಿದರು ಭಾಗವಹಿಸಿ, ಗ್ಯಾಲರಿಯನ್ನು ವೀಕ್ಷಿಸಿದರು.
ಫೋರಂನ ಸದಸ್ಯರೂ ಆಗಿರುವ ಕಲಾ ವಿಮರ್ಶಕ ಚಿ.ಸು.ಕೃಷ್ಣಸೆಟ್ಟಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್, ಕಲಾವಿದೆಯರಾದ ಶೀಲಾ ಗೌಡ, ಪುಷ್ಪಮಾಲಾ, ಅಲಕಾ ರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇದೇ ವೇಳೆ ರಿಬ್ಬನ್ ಕತ್ತರಿಸುವ ಮೂಲಕ ಮತ್ತೊಮ್ಮೆ ಉದ್ಘಾಟಿಸಿ, ಪ್ರವೇಶ ಮಾಡಿದರು. ಸಿಹಿ ಹಂಚಿ ಸಂಭ್ರಮಿಸಿದ ಕಲಾವಿದರು, ಗ್ಯಾಲರಿಯಲ್ಲಿನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.