ಬೆಂಗಳೂರು: ‘ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಕಂಪನಿ ಪಡೆದಿರುವ ಸಾಲಕ್ಕೆ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ (ಯುಎಸ್ಎಲ್) ಕಂಪನಿ ಹೊಣೆಯಾಗುವುದಿಲ್ಲ’ ಎಂದು ಹಿರಿಯ ವಕೀಲ ಪಿ. ಚಿದಂಬರಂ ಹೈಕೋರ್ಟ್ ಗೆ ತಿಳಿಸಿದರು.
‘ಸಾಲ ತೀರಿಸಿದ್ದರೂ ನಮಗೆ ಇನ್ನೂ ಋಣಮುಕ್ತ ಪತ್ರ ನೀಡಿಲ್ಲ’ ಎಂದು ಆಕ್ಷೇಪಿಸಿಐಡಿಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದ್ದ ಯುಎಸ್ಎಲ್ ಕಂಪನಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಯುಎಸ್ಎಲ್ ಕಂಪನಿ ಪರ ವಾದ ಮಂಡಿಸಿದ ಚಿದಂಬರಂ, ‘ಮಲ್ಯ ಯುಎಸ್ಎಲ್ ಕಂಪನಿಗೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಾಲ ಪಡೆಯಲಾಗಿತ್ತು ಮತ್ತು ಅದನ್ನು ಈಗಾಗಲೇ ತೀರಿಸಲಾಗಿದೆ. ಆದರೆ, ಮಲ್ಯ ಕಿಂಗ್ ಫಿಷರ್ ಕಂಪನಿಯಲ್ಲಿ ಸಾಲ ಪಡೆದಿದ್ದಾರೆ. ಅವರು ಅಧ್ಯಕ್ಷರಾಗಿದ್ದ ಕಾರಣಕ್ಕೆ ಸಾಲ ನೀಡಲಾಗಿತ್ತು ಎಂಬ ಬ್ಯಾಂಕ್ ವಾದ ಸಮರ್ಥನೀಯವಲ್ಲ ಮತ್ತು ಈ ಕಾರಣಕ್ಕಾಗಿಯೇ ಇನ್ನೂ ಋಣಮುಕ್ತ ಪತ್ರ ನೀಡುತ್ತಿಲ್ಲ’ ಎಂದು ಆಕ್ಷೇಪಿಸಿದರು.
ಚಿದಂಬರಂ ವಾದವನ್ನು ಅಲ್ಲಗಳೆದ ಬ್ಯಾಂಕ್ ಪರ ವಕೀಲ ಎಲ್.ವಿ.ಶ್ರೀನಿವಾಸ್ ಅವರು, ‘ಸಾಲ ನೀಡುವಾಗ ಮಲ್ಯ ಯುಎಸ್ ಎಲ್ ಕಂಪನಿಯ ಅಧ್ಯಕ್ಷರಾಗಿದ್ದರು ಎಂಬ ಕಾರಣಕ್ಕಾಗಿಯೇ ಸಾಲ ನೀಡಲಾಗಿದೆ. ಈಗ ಅವರು ಆ ಸ್ಥಾನದಲ್ಲಿ ಇಲ್ಲ ಎಂದಾಕ್ಷಣ ಅಂದಿನ ಪ್ರಕರಣದಿಂದ ಬಚಾವಾಗಲು ಸಾಧ್ಯವಿಲ್ಲ. ಶೇರು ಮಾರುಕಟ್ಟೆಯಲ್ಲಿ ಅಂದು ಕಂಪನಿಯು ಬ್ರಾಂಡ್ ವ್ಯಾಲ್ಯೂ ನೋಡಿಯೇ ಸಾಲ ನೀಡಲಾಗಿತ್ತು’ ಎಂದು ತಿಳಿಸಿದರು.
ವಿಚಾರಣೆಯನ್ನು 2019ರ ಜನವರಿ 3ಕ್ಕೆ ಮುಂದೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.