ADVERTISEMENT

ದೌರ್ಜನ್ಯದಿಂದ ಭಗವಾಧ್ವಜ ಕಟ್ಟಿದ ಆರೋಪ; ಎನ್‌ಸಿಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 24 ಮೇ 2020, 15:12 IST
Last Updated 24 ಮೇ 2020, 15:12 IST
ಬೆಂಗಳೂರು ನಗರ ಪೊಲೀಸ್
ಬೆಂಗಳೂರು ನಗರ ಪೊಲೀಸ್   

ಬೆಂಗಳೂರು: ವಿಜಯನಗರದ ಕೆಲ ಅಂಗಡಿಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯದಿಂದ ಭಗವಾಧ್ವಜ ಕಟ್ಟಿದ ಆರೋಪದಡಿ ಎಂ.ಎಲ್.ಶಿವಕುಮಾರ್ ಹಾಗೂ ಇತರರ ವಿರುದ್ಧ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.

‘ಪ್ರಕರಣ ಸಂಬಂಧ ವಿಜಯನಗರ ಬೀದಿಬದಿ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ದೂರು ನೀಡಿದ್ದರು. ಅದನ್ನು ಪರಿಶೀಲಿಸಿ ಎನ್‌ಸಿಆರ್ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ಹೇಳಿದರು.

ದೂರಿನ ವಿವರ:‘ಜಾತಿ, ಧರ್ಮವೆಂಬ ಬೇಧವಿಲ್ಲದೇ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ 38 ವರ್ಷಗಳಿಂದ ವಿಜಯನಗರದ ಬೀದಿ ಬದಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ. ಇದೇ 20ರಂದು ಮಧ್ಯಾಹ್ನ ಅಂಗಡಿ ಬಳಿ ಬಂದಿದ್ದ ಎಂ.ಎಲ್‌.ಶಿವಕುಮಾರ್, ಹೇಮೇಶ್‌ ಬಾಬು ಮತ್ತು ಸಹಚರರು, ಬಲವಂತ ಹಾಗೂ ದೌರ್ಜನ್ಯದಿಂದ ಅಂಗಡಿಗಳ ಎದುರು ಭಗವಾಧ್ವಜ ಕಟ್ಟಿದ್ದರು’ ಎಂದು ದೂರಿನಲ್ಲಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಣಗೌಡ, ಕೃಷ್ಣರಾಜ, ರಿಯಾಜ್, ಬಿ.ಆರ್.ನಂಜುಂಡಯ್ಯ, ಮಂಜಣ್ಣ ಹಾಗೂ ಇತರರು ಆರೋಪಿಸಿದ್ದಾರೆ.

ADVERTISEMENT

‘ಭಗವಾಧ್ವಜಗಳನ್ನು ತೆಗೆದರೆ ಅಂಗಡಿಗಳನ್ನು ತೆರವು ಮಾಡುವುದಾಗಿ ಶಿವಕುಮಾರ್‌ ಹಾಗೂ ಇತರೆ ಆರೋಪಿಗಳು ಬೆದರಿಕೆ ಹಾಕಿದ್ದರು. ಮರುದಿನ 21ರಂದು ಸಹ ಆರೋಪಿಗಳು ಸ್ಥಳಕ್ಕೆ ಬಂದು ಪುನಃ ಭಗವಾಧ್ವಜ ಕಟ್ಟಿ ಹೋಗಿದ್ದರು’

‘ಭಗವಾಧ್ವಜ ಕಟ್ಟುವ ಮೂಲಕ ವಿಜಯನಗರದಲ್ಲಿ ಶಾಂತಿಗೆ ಧಕ್ಕೆ ತರುವ ಹಾಗೂ ಎರಡು ಧರ್ಮಗಳ ನಡುವೆ ವೈರುತ್ವ ಬೆಳೆಸುವ ಕೆಲಸವನ್ನು ಆರೋಪಿಗಳು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.