ಬೊಮ್ಮನಹಳ್ಳಿ: ‘ಕಾಲೇಜುಗಳು ಕೇವಲ ಪದವಿ ನೀಡಿ ಕೈತೊಳೆದುಕೊಳ್ಳುವುದಲ್ಲ, ಬದಲಾಗಿ ಐಐಟಿ ಮಾದರಿಯ ಗುಣಮಟ್ಟದ ಶಿಕ್ಷಣ ನೀಡುವತ್ತ ವಿದ್ಯಾಸಂಸ್ಥೆಗಳು ಚಿತ್ತ ಹರಿಸಬೇಕು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಬಾಲವೀರರೆಡ್ಡಿ ಹೇಳಿದರು.
ಹೊಸೂರು ರಸ್ತೆ ಬೊಮ್ಮನಹಳ್ಳಿಯ ಆಕ್ಸ್ ಫರ್ಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 17ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಲು ಶಿಕ್ಷಕರು ಗಮನ ನೀಡಬೇಕು. ಉದ್ಯೋಗ ಅರಸುವವರ ಬದಲು ಉದ್ಯೋಗದಾತರನ್ನು ರೂಪಿಸಬೇಕು’ ಎಂದರು.
‘ದೇಶದಲ್ಲಿ ಸರಕು ಆಮದು ಪ್ರಮಾಣ ಹೆಚ್ಚುತ್ತಿದೆ. ಸರಕು ಉತ್ಪಾದನೆಯ ಜತಗೆ ರಫ್ತು ಮಾಡುವ ಸಾಮರ್ಥ್ಯವೂ ಹೆಚ್ಚಬೇಕಿದೆ. ಎಂಜಿನಿಯರಿಂಗ್ ಪದವೀಧರರು ಹೊಸ ಆವಿಷ್ಕಾರದಲ್ಲಿ ತೊಡಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎನ್.ವಿ.ಎಲ್.ನರಸಿಂಹರಾಜು, ‘ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಗೆ ಸಾಮರ್ಥ್ಯ ವೃದ್ಧಿಯತ್ತ ಗಮನವಹಿಸಬೇಕು. ಆಕ್ಸ್ಫರ್ಡ್ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕೌಶಲ ಮೂಡಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳೇ ನಮ್ಮ ಕಾಲೇಜಿನ ರಾಯಭಾರಿಗಳು’ ಎಂದರು.
ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರ್ಯಾಂಕ್ ವಿಜೇತರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಡಾ.ಎನ್.ಕಣ್ಣನ್, ನಿರ್ದೇಶಕ ಡಾ.ಕೆ.ಎಂ.ರವಿಕುಮಾರ್, ಆಡಳಿತ ಮಂಡಳಿ ಸದಸ್ಯ ವೆಂಕಟೇಶ್ವರಲು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.