ADVERTISEMENT

ವಕ್ಫ್‌ ಮಂಡಳಿಗೆ ಭೂಮಿ; ಜಿಲ್ಲಾಧಿಕಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 20:00 IST
Last Updated 25 ನವೆಂಬರ್ 2018, 20:00 IST

ಬೆಂಗಳೂರು: ಹೆಗಡೆನಗರದ ಖಾಲಿ ಜಾಗವನ್ನು ವಕ್ಫ್‌ ಮಂಡಳಿಗೆ ಹಸ್ತಾಂತರಿಸುವ ಸಂಬಂಧ ನಗರದ ಜಿಲ್ಲಾಧಿಕಾರಿ ವಿಜಯಶಂಕರ್‌ ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

2017ರಲ್ಲಿ ಕಂದಾಯ ಇಲಾಖೆ ಸಭೆಯಲ್ಲಿ ‘ಇಲ್ಲಿನ ವಸ್ತುಸ್ಥಿತಿ ನೋಡಿಕೊಂಡು ಜಾಗವು ವಕ್ಫ್‌ ಮಂಡಳಿಗೆ ಸೇರಿದ್ದರೆ ಅದನ್ನು ಅವರಿಗೆ ಕೊಡಬಹುದು’ ಎಂದು ನಿರ್ಣಯಿಸಲಾಗಿತ್ತು. ಅದರಂತೆ ಇಂದು ಪರಿಶೀಲನೆ ನಡೆದಿದೆ ಎಂದು ವಿಜಯಶಂಕರ್‌ ತಿಳಿಸಿದರು.

‘ಈ ಪ್ರದೇಶದಲ್ಲಿ ಒಟ್ಟು 605 ಎಕರೆ ಜಾಗ ಇತ್ತು. ಕಾಲಕ್ರಮೇಣ ಈ ಜಾಗವನ್ನು ಸರ್ಕಾರ ಬೇರೆ ಬೇರೆ ಸಂಸ್ಥೆಗಳಿಗೆ ಹಂಚಿತ್ತು. ಅದರಲ್ಲಿ ಎಷ್ಟು ಪ್ರದೇಶ ಮಂಜೂರಾಗಿದೆ ಎಂಬ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಯಬೇಕಿದೆ. ವಕ್ಫ್‌ ಮಂಡಳಿಯವರು ಹೇಳುವ ಪ್ರಕಾರ ಇಲ್ಲಿ 83 ಎಕರೆಗಳಷ್ಟು ಅವರಿಗೆ ಸೇರಿದ ಜಾಗವಿದೆ. ಆದರೆ, ನಾವು ಅವುಗಳ ದಾಖಲೆ ಪರಿಶೀಲಿಸಬೇಕು. ಯಾರಾದರೂ ಜಾಗದ ಮಾಲೀಕರು ತಾವು ಎಂದು ಹೇಳುವ ಸಾಧ್ಯತೆಯೂ ಇದೆ. ಕೆಲವು ಜಾಗಗಳಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ಅವುಗಳ ಸ್ಥಿತಿಗತಿಯನ್ನು ನೋಡಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

ADVERTISEMENT

‘ಈ ಪ್ರದೇಶದ ಬಗ್ಗೆ ಎಲ್ಲ ಆಯಾಮಗಳನ್ನು ನೋಡಬೇಕು. ಬಳಿಕ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಿ ತಿಂಗಳೊಳಗಾಗಿ ವಸ್ತುಸ್ಥಿತಿಯ ವರದಿ ಕೊಡಬೇಕು. ಬಳಿಕವಷ್ಟೇ ವಕ್ಫ್‌ ಮಂಡಳಿಗೆ ಸೇರಿದ ಜಾಗ ಎಷ್ಟು ಇದೆ ಎಂಬುದು ಗೊತ್ತಾಗಲಿದೆ. ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.